ನವದೆಹಲಿ: ಸರಿಯಾದ ಸಮಯದಲ್ಲಿ ಸೂಕ್ತ ನಿರ್ಧಾರಗಳನ್ನು ಕೈಗೊಂಡದ್ದರಿಂದಾಗಿ ಕೋವಿಡ್–19 ವಿರುದ್ಧದ ಹೋರಾಟದಲ್ಲಿ ಭಾರತವು ಇತರ ದೇಶಗಳಿಗಿಂತ ಉತ್ತಮ ಸ್ಥಿತಿಯಲ್ಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ದೇಶಲ್ಲಿ ವೇಗವಾಗಿ ಆರೋಗ್ಯ ಮೂಲಸೌಕರ್ಯಗಳನ್ನು ವಿಸ್ತರಿಸಲಾಗಿದೆ ಎಂದೂ ಅವರು ಹೇಳಿದ್ದಾರೆ.
ನೊಯ್ಡಾ, ಮುಂಬೈ ಹಾಗೂ ಕೋಲ್ಕತ್ತದಲ್ಲಿ ಕೊರೊನಾ ಪರೀಕ್ಷೆ ಸೌಲಭ್ಯವನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಜಾಗೃತಿಯ ಕೊರತೆಯಿಲ್ಲ. ನಮ್ಮಲ್ಲಿ ವೈಜ್ಞಾನಿಕ ದತ್ತಾಂಶಗಳನ್ನು ವಿಸ್ತರಿಸಲಾಗುತ್ತದೆ ಮತ್ತು ಸಂಪನ್ಮೂಲಗಳೂ ಹೆಚ್ಚುತ್ತಿವೆ ಎಂದು ಹೇಳಿದ್ದಾರೆ.
ಇತರ ರಾಷ್ಟ್ರಗಳಿಗೆ ಹೋಲಿಸಿದರೆ ನಮ್ಮಲ್ಲಿ ಸಾವಿನ ಸಂಖ್ಯೆಯೂ ಕಡಿಮೆಯಿದೆ. ಪರೀಕ್ಷಾ ಲ್ಯಾಬ್ಗಳ, ಪಿಪಿಇ ಕಿಟ್ಗಳ ಹೆಚ್ಚಳ ಹಾಗೂ ಇತರ ಕೋವಿಡ್ ಚಿಕಿತ್ಸಾ ಸೌಕರ್ಯಗಳನ್ನು ಶೀಘ್ರವಾಗಿ ಹೆಚ್ಚಿಸಲಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ.
‘ಜನವರಿಯಲ್ಲಿ ನಮ್ಮಲ್ಲಿ ಒಂದೇ ಒಂದು ಕೊರೊನಾ ಪರೀಕ್ಷಾ ಕೇಂದ್ರವಿತ್ತು. ಈಗ 1,300 ಲ್ಯಾಬ್ಗಳು ಕಾರ್ಯಾಚರಿಸುತ್ತಿವೆ. ಹೊಸ ಪರೀಕ್ಷಾ ಸೌಲಭ್ಯಗಳು ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದಲ್ಲಿ ಕೋವಿಡ್–19 ವಿರುದ್ಧದ ಹೋರಾಟಕ್ಕೆ ಹೆಚ್ಚಿನ ಬಲ ನೀಡಲಿದೆ ಎಂದು ಮೋದಿ ಹೇಳಿದ್ದಾರೆ.
ನೊಯ್ಡಾದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಕ್ಯಾನ್ಸರ್ ಪ್ರಿವೆಂನ್ಶನ್ ಆ್ಯಂಡ್ ರಿಸರ್ಚ್ ಸೆಂಟರ್, ಮುಂಬೈಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಫರ್ ರಿಸರ್ಚ್ ಇನ್ ಪ್ರೊಡಕ್ಟಿವ್ ಹೆಲ್ತ್ ಹಾಗೂ ಕಾಲರಾ ಆ್ಯಂಡ್ ಎಂಟೆರಿಕ್ ಡಿಸೀಸಸ್ ಇನ್ ಕೋಲ್ಕತ್ತದಲ್ಲಿ ಮೂರು ಹೈಟೆಕ್ ಪರೀಕ್ಷಾ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಇವುಗಳಲ್ಲಿ ಪ್ರತಿಯೊಂದರಲ್ಲಿಯೂ ದಿನವೊಂದರಲ್ಲಿ 10 ಸಾವಿರ ಮಾದರಿಗಳ ಪರೀಕ್ಷೆ ನಡೆಸಬಹುದಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.