ADVERTISEMENT

ವಾರಾಣಸಿ: ‘ಕಾಶಿ- ತಮಿಳು ಸಂಗಮಮ್’ ಕಾರ್ಯಕ್ರಮಕ್ಕೆ ಇಂದು ಪ್ರಧಾನಿ ಮೋದಿ ಚಾಲನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ನವೆಂಬರ್ 2022, 5:17 IST
Last Updated 19 ನವೆಂಬರ್ 2022, 5:17 IST
   

ವಾರಾಣಸಿ: ಉತ್ತರ ಪ್ರದೇಶದ ವಾರಾಣಸಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು‘ಕಾಶಿ- ತಮಿಳು ಸಂಗಮಮ್’ಎಂಬ ತಿಂಗಳ ಅವಧಿಯ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

ಡಿಸೆಂಬರ್ 16ರವರೆಗೆ ಈ ಕಾರ್ಯಕ್ರಮ ನಡೆಯಲಿದ್ದು, ದೇಶದ ಎರಡು ಐತಿಹಾಸಿಕ ಪ್ರದೇಶಗಳಾದ ತಮಿಳುನಾಡು ಮತ್ತು ಕಾಶಿ ನಡುವಿನ ಹಳೆಯ ಕೊಂಡಿಗಳನ್ನು ಮರುಶೋಧಿಸಿ ಬೆಸೆಸುವ ಮತ್ತು ಎರಡರ ಸಾಂಪ್ರದಾಯಿಕ ಸಂಸ್ಕೃತಿಯನ್ನು ತಿಳಿಯುವ ಉದ್ದೇಶ ಹೊಂದಿದೆ.

ಬನಾರಸ್‌ ವಿಶ್ವವಿದ್ಯಾಲಯದ ಬಯಲು ರಂಗಮಂದಿರದ ಮೈದಾನದಲ್ಲಿ ಪ್ರಧಾನಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಇದು ಕೇಂದ್ರ ಸರ್ಕಾರದ ‘ಆಜಾದಿ ಕ ಅಮೃತ್‌ ಮಹೋತ್ಸವ್‌’ ಕಾರ್ಯಕ್ರಮದ ಭಾಗವಾಗಿದೆ.

ADVERTISEMENT

ಈ ಸಂಬಂಧ ಕೇಂದ್ರ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವ ಧರ್ಮೇಂದ್ರ ಪ್ರಧಾನ್ ಅವರು ವಾರಾಣಸಿಗೆ ಭೇಟಿ ನೀಡಿ ಪೂರ್ವಭಾವಿ ವ್ಯವಸ್ಥೆಗಳ ಪರಿಶೀಲನೆ ನಡೆಸಿದರು.

ಸಂಸ್ಕೃತಿ, ಜವಳಿ, ರೈಲ್ವೆ, ಪ್ರವಾಸೋದ್ಯಮ, ಆಹಾರ ಸಂಸ್ಕರಣೆ, ಮಾಹಿತಿ ಮತ್ತು ಪ್ರಸಾರ ಇಲಾಖೆ ಮತ್ತು ಉತ್ತರ ಪ್ರದೇಶ ಸರ್ಕಾರದ ಸಹಯೋಗದಲ್ಲಿ ಕೇಂದ್ರದ ಶಿಕ್ಷಣ ಸಚಿವಾಲಯವು ಕಾಶಿ-ತಮಿಳು ಸಂಗಮಮ್ ಅನ್ನು ಆಯೋಜಿಸಿದೆ.

ಕಾರ್ಯಕ್ರಮದಲ್ಲಿ ಈ ಎರಡೂ ಪ್ರದೇಶಗಳ ವಿದ್ವಾಂಸರು, ವಿದ್ಯಾರ್ಥಿಗಳು, ತತ್ವಜ್ಞಾನಿಗಳು, ವ್ಯಾಪಾರಿಗಳು, ಕುಶಲಕರ್ಮಿಗಳು, ಕಲಾವಿದರೊಂದಿಗೆ ಇತರ ಹಂತಗಳ ಜನರು ಒಟ್ಟಿಗೆ ಸೇರಲು, ಅವರ ಜ್ಞಾನ, ಸಂಸ್ಕೃತಿ ಮತ್ತು ಉತ್ತಮ ಅಭ್ಯಾಸಗಳನ್ನು ಪರಸ್ಪರ ವಿನಿಮಯಮಾಡಿಕೊಳ್ಳಲು ಮತ್ತು ಪರಸ್ಪರರ ಅನುಭವದಿಂದ ಕಲಿಯಲೋಸುಗ ಈ ಕಾರ್ಯಕ್ರಮವು ಅವಕಾಶವನ್ನು ಒದಗಿಸುವ ಗುರಿಯನ್ನು ಹೊಂದಿದೆ.

ವಿದ್ಯಾರ್ಥಿಗಳು, ಶಿಕ್ಷಕರು, ಸಾಹಿತ್ಯ, ಸಂಸ್ಕೃತಿ, ಕುಶಲಕರ್ಮಿಗಳು, ಆಧ್ಯಾತ್ಮಿಕ, ಪರಂಪರೆ, ವ್ಯಾಪಾರ, ಉದ್ಯಮಿಗಳು, ವೃತ್ತಿಪರರು ಮುಂತಾದ 12 ವಿಭಾಗಗಳ ಅಡಿಯಲ್ಲಿ ತಮಿಳುನಾಡಿನ 2500 ಕ್ಕೂ ಹೆಚ್ಚಿನ ಮಂದಿ ವಾರಣಾಸಿಗೆ 8 ದಿನಗಳ ಈ ಪ್ರವಾಸದಲ್ಲಿ ಭೇಟಿ ನೀಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.