ನವದೆಹಲಿ: ಕಾಬೂಲ್ನಲ್ಲಿ ಅಂತರ್ಗತ ಸರ್ಕಾರ ಮತ್ತು ಭಯೋತ್ಪಾದಕ ಸಂಘಟನೆಗಳು ದೇಶದ ನೆಲವನ್ನು ಬಳಸಿಕೊಳ್ಳುವಿಕೆ ಬಗ್ಗೆ ಶೂನ್ಯ ಸಹಿಷ್ಣುತೆ ಸೇರಿದಂತೆ ಅಫ್ಗಾನಿಸ್ತಾನದ ಬಗ್ಗೆ ಗಮನ ಹರಿಸಬೇಕಾದ 4 ವಿಷಯಗಳನ್ನು ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪಿಸಿದ್ದಾರೆ.
ಭಾರತ ಆತಿಥ್ಯ ವಹಿಸಿದ್ದ ಇರಾನ್, ಕಜಕಿಸ್ತಾನ್, ರಷ್ಯಾ, ಕಿರ್ಗಿಸ್ತಾನ್, ತಜಿಕಿಸ್ತಾನ್, ಉಜ್ಬೇಕಿಸ್ತಾನ್ ದೇಶಗಳ ಉನ್ನತ ಭದ್ರತಾಧಿಕಾರಿಗಳ ಸಭೆಯಲ್ಲಿ ಮೋದಿ 4 ಪ್ರಮುಖ ಅಂಶಗಳನ್ನು ಬಗ್ಗೆ ಗಮನ ಸೆಳೆದಿದ್ದಾರೆ.
ಅಫ್ಗಾನಿಸ್ತಾನದಿಂದ ಮಾದಕ ವಸ್ತು ಮತ್ತು ಶಸ್ತ್ರಾಸ್ತ್ರಗಳ ಕಳ್ಳಸಾಗಣೆ ತಡೆಗೆ ಕಾರ್ಯತಂತ್ರ ಮತ್ತು ಕುಸಿಯುತ್ತಿರುವ ಮಾನವೀಯ ಮೌಲ್ಯಗಳ ಪುನಃಸ್ಥಾಪಿಸುವಿಕೆ ಮೋದಿ ಪ್ರಸ್ತಾಪಿಸಿದ ಇತರೆ ಎರಡು ಅಂಶಗಳಾಗಿವೆ.
‘ಅಫ್ಗಾನಿಸ್ತಾನಕ್ಕೆ ಸಂಬಂಧಿಸಿದಂತೆ ಅಂತರ್ಗತ ಸರ್ಕಾರ, ಭಯೋತ್ಪಾದಕ ಕೃತ್ಯಕ್ಕೆ ಅಫ್ಗಾನ್ ನೆಲ ಬಳಕೆ ಬಗ್ಗೆ ಶೂನ್ಯ ಸಹಿಷ್ಣುತೆ, ಮಾದಕ ವಸ್ತು ಮತ್ತು ಶಸ್ತ್ರಾಸ್ತ್ರಗಳ ಕಳ್ಳಸಾಗಣೆ ತಡೆಗೆ ಕಾರ್ಯತಂತ್ರ ಮತ್ತು ಕುಸಿಯುತ್ತಿರುವ ಮಾನವೀಯ ಮೌಲ್ಯಗಳನ್ನು ಪುನಃಸ್ಥಾಪಿಸುವ ಬಗ್ಗೆ ಮೋದಿ ಪ್ರಸ್ತಾಪಿಸಿದ್ದಾರೆ’ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಪ್ರಾದೇಶಿಕ ಭದ್ರತಾ ಮಾತುಕತೆಗಳು ಕೇಂದ್ರ ಏಷ್ಯಾದ ಸಾಂಪ್ರದಾಯಿಕ ಅಭಿವೃದ್ಧಿಪೂರಕ ಸಂಸ್ಕೃತಿ ಪುನಃಸ್ಥಾಪಿಸಲು ನೆರವಾಗಲಿದೆ ಎಂಬ ವಿಶ್ವಾಸವನ್ನು ಮೋದಿ ವ್ಯಕ್ತಪಡಿಸಿದ್ದಾರೆ ಎಂದು ಅದು ತಿಳಿಸಿದೆ.
ಪರಸ್ಪರ ಅಭಿಪ್ರಾಯ ಹಂಚಿಕೊಳ್ಳಲು ಭಾರತ ಏರ್ಪಡಿಸಿದ ಸಭೆಗೆ ಕೇಂದ್ರ ಏಷ್ಯಾದ ರಾಷ್ಟ್ರಗಳ ಭದ್ರತಾ ಅಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.