ADVERTISEMENT

ಪಿಎನ್‌ಬಿ ಹಗರಣ: ನೀರವ್‌ ಮೋದಿ ಆಪ್ತನಿಗೆ ಜಾಮೀನು

ಪಿಟಿಐ
Published 18 ಏಪ್ರಿಲ್ 2023, 16:19 IST
Last Updated 18 ಏಪ್ರಿಲ್ 2023, 16:19 IST
ನೀರವ್‌ ಮೋದಿ
ನೀರವ್‌ ಮೋದಿ    

ಮುಂಬೈ: ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ (ಪಿಎನ್‌ಬಿ) ಸಾವಿರಾರು ಕೋಟಿ ವಂಚಿಸಿರುವ ಹಗರಣದ ಪ್ರಮುಖ ಆರೋಪಿ, ದೇಶಭ್ರಷ್ಟ ವಜ್ರ ವ್ಯಾಪಾರಿ ನೀರವ್ ಮೋದಿಯ ಆಪ್ತ ಸಹಾಯಕ ಸುಭಾಷ್‌ ಪರಬ್‌ಗೆ ವಿಶೇಷ ಪಿಎಂಎಲ್‌ಎ (ಹಣ ಅಕ್ರಮ ವರ್ಗಾವಣೆ ತಡೆ) ನ್ಯಾಯಾಲಯವು ಮಂಗಳವಾರ ಜಾಮೀನು ನೀಡಿದೆ.

ವಿಶೇಷ ಪಿಎಂಎಲ್‌ಎ ನ್ಯಾಯಾಲಯದ ನ್ಯಾಯಾಧೀಶ ಎಸ್.ಎಂ. ಮೆನ್‌ಜಾಂಗ್‌ ಅವರು ಪರಬ್‌ಗೆ ಜಾಮೀನು ಮಂಜೂರು ಮಾಡಿದರು. ಈ ಅಪರಾಧ ಪ್ರಕರಣದಲ್ಲಿ ಸುಭಾಷ್‌ ಪರಬ್‌ ಆದಾಯ ಮಾಡಿಕೊಂಡ ಫಲಾನುಭವಿಯಲ್ಲ ಎಂದು ಪರಬ್‌ ಪರ ವಕೀಲರು ಜಾಮೀನು ಅರ್ಜಿಯಲ್ಲಿ ವಾದಿಸಿದರು. ಮೋದಿ ಎಸಗಿರುವ ವಂಚನೆ ಬೆಳಕಿಗೆ ಬರುವ ಮುನ್ನವೇ ಪರಬ್‌ ದೇಶ ತೊರೆದಿದ್ದರಿಂದ ಅವರನ್ನು ಪ್ರಕರಣಕ್ಕೆ ಅಗತ್ಯವಾಗಿ ಬೇಕಿರುವ ಆರೋಪಿ ಎಂದು ಸಿಬಿಐ ಹೆಸರಿಸಿತ್ತು.

ಸುಭಾಷ್‌ ಪರಬ್‌, ನೀರವ್‌ ಮೋದಿಯ ಒಡೆತನದ ಫೈರ್ ಸ್ಟಾರ್ ಡೈಮಂಡ್‌ ಕಂಪನಿಯ ಹಣಕಾಸು ವಿಭಾಗದ ಉಪ ಪ್ರಧಾನ ವ್ಯವಸ್ಥಾಪಕ (ಹಣಕಾಸು) ಆಗಿದ್ದರು. ಇವರನ್ನು 2022ರಲ್ಲಿ ಈಜಿಪ್ಟ್‌ನ ಕೈರೋದಿಂದ ಭಾರತಕ್ಕೆ ಗಡೀಪಾರು ಮಾಡಲಾಗಿತ್ತು. ನೀರವ್‌ ಮೋದಿ ಮತ್ತು ಅವರ ಚಿಕ್ಕಪ್ಪ ಮೆಹುಲ್ ಚೋಕ್ಸಿ ಸಾರ್ವಜನಿಕ ವಲಯದ ಪಿಎನ್‌ಬಿಯಲ್ಲಿ ₹13 ಸಾವಿರ ಕೋಟಿ ಸಾಲ ಪಡೆದು ವಂಚಿಸಿರುವ ಈ ಪ್ರಕರಣದಲ್ಲಿ ಪರಬ್‌ ಪ್ರಮುಖ ಸಾಕ್ಷಿಯಾಗಿದ್ದಾರೆ. ಪರಬ್‌ ಪತ್ತೆಗೆ ಮತ್ತು ಮರಳಿ ಕರೆತರಲು ಭಾರತ ಇಂಟರ್‌ಪೋಲ್ ಮೂಲಕ ರೆಡ್ ಕಾರ್ನರ್‌ ನೋಟಿಸ್‌ ಜಾರಿಗೊಳಿಸಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.