ನವದೆಹಲಿ:‘ಅತ್ಯಾಚಾರಕ್ಕೊಳಗಾಗಿರುವ ಅಪ್ರಾಪ್ತೆಯು ನ್ಯಾಯಾಲಯದ ವಿಚಾರಣೆ ವೇಳೆ ಹಾಜರಿರುವ ಮೂಲಕ ಮಾನಸಿಕ ವೇದನೆ ಅನುಭವಿಸಿರುತ್ತಾಳೆ. ಆಕೆಗೆ ಇಷ್ಟವಿಲ್ಲದಿದ್ದರೆ ವಿಚಾರಣೆ ನೆಪದಲ್ಲಿ ಅತ್ಯಾಚಾರದ ಘಟನೆಯನ್ನು ಮತ್ತೆ ನೆನಪಿಸಬಾರದು. ಆ ಮೂಲಕ ಆಕೆಯ ಮನಸ್ಸನ್ನು ಘಾಸಿಗೊಳಿಸಬಾರದು’ ಎಂದು ದೆಹಲಿ ಹೈಕೋರ್ಟ್ ಗುರುವಾರ ಹೇಳಿದೆ.
ತನ್ನ ಮಗಳ ಮೇಲೆ ಅತ್ಯಾಚಾರ ನಡೆಸಿ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ವ್ಯಕ್ತಿ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿ ಜಸ್ಮೀತ್ ಸಿಂಗ್ ಹೀಗೆ ಅಭಿಪ್ರಾಯಪಟ್ಟಿದ್ದಾರೆ.
‘ಸಂತ್ರಸ್ತೆಯನ್ನು ಅಪರಾಧಿಯ ಎದುರು ನಿಲ್ಲಿಸಿಕೊಂಡೇ ಆರೋಪ–ಪ್ರತ್ಯಾರೋಪಗಳನ್ನು ಮಾಡುವುದು, ಆಕೆಯ ಪ್ರಾಮಾಣಿಕತೆ ಹಾಗೂ ನಡತೆಯ ಬಗ್ಗೆ ಅನುಮಾನ ವ್ಯಕ್ತಪಡಿಸುವುದು ಸರಿಯಲ್ಲ. ಇದರಿಂದ ಆಕೆಯ ಮನಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಲಿದೆ’ ಎಂದು ಜಸ್ಮೀತ್ ಸಿಂಗ್ ಅವರು ಆಗಸ್ಟ್ 1ರ ತೀರ್ಪಿನಲ್ಲಿ ಹೇಳಿದ್ದಾರೆ.
‘ಪತ್ನಿ ಹಾಗೂ ಸಂತ್ರಸ್ತೆ ರಾಜಸ್ಥಾನದಲ್ಲಿ ನೆಲೆಸಿದ್ದು, ಅಲ್ಲಿಗೆ ಯಾವುದೇ ಕಾರಣಕ್ಕೂ ಭೇಟಿ ನೀಡಬಾರದು. ಕರೆದಾಗ ಮತ್ತೆ ವಿಚಾರಣೆಗೆ ಹಾಜರಾಗಬೇಕು’ ಎಂಬ ಷರತ್ತುಗಳೊಂದಿಗೆ ಅರ್ಜಿದಾರರಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.