ತಿರುವನಂತಪುರ: ಅಮೆರಿಕದಲ್ಲಿ ಪೊಲೀಸ್ ದೌರ್ಜನ್ಯಕ್ಕೆ ಒಳಗಾಗಿ ಸಾವಿಗೀಡಾದ ಜಾರ್ಜ್ ಫ್ಲಾಯ್ಡ್ ಪ್ರಕರಣ ಈಗ ಕೇರಳದಲ್ಲೂ ಪ್ರತಿಧ್ವನಿಸುತ್ತಿದೆ. ಜಾರ್ಜ್ ಫ್ಲಾಯ್ಡ್ ಪ್ರಕರಣದ ರೀತಿಯಲ್ಲೇ ಪೊಲೀಸರು ನಡೆಸಿದ ದೌರ್ಜನ್ಯಕ್ಕೆ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ.
ಉನ್ನತ ಶಿಕ್ಷಣ ಸಚಿವ ಕೆ.ಟಿ. ಜಲೀಲ್ ಅವರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಕಾರ್ಯಕರ್ತರೊಬ್ಬರ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯದ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ರಸ್ತೆಯಲ್ಲೇ ಕಾರ್ಯಕರ್ತನ ಮೇಲೆ ಕುಳಿತು ಥಳಿಸುತ್ತಿರುವ ಚಿತ್ರ ಇದಾಗಿದೆ. ಈತ ಯುವ ಕಾಂಗ್ರೆಸ್ ಕಾರ್ಯಕರ್ತ ಎನ್ನಲಾಗಿದೆ.
ಸಚಿವ ಕೆ.ಟಿ. ಜಲೀಲ್ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಈ ಯುವ ಕಾಂಗ್ರೆಸ್ ಕಾರ್ಯಕರ್ತ ಭಾಗಿಯಾಗಿದ್ದ. ಸಚಿವ ಜಲೀಲ್ ಅವರು ಭಾನುವಾರ ಮಲಪ್ಪುರಂನಿಂದ ತಿರುವನಂತಪುರಕ್ಕೆ ತೆರಳುತ್ತಿದ್ದಾಗ ವ್ಯಾಪಕ ಪ್ರತಿಭಟನೆಗಳು ನಡೆದಿದ್ದವು. ಎರ್ನಾಕುಲಂ ಜಿಲ್ಲೆಯ ಅಂಗಾಮಲಿಯಲ್ಲೂ ಪ್ರತಿಭಟನೆ ನಡೆದಿತ್ತು. ಸಚಿವರ ವಾಹನ ತಮ್ಮ ಠಾಣೆಯ ವ್ಯಾಪ್ತಿಯಲ್ಲಿ ಸುಗಮವಾಗಿ ಸಂಚರಿಸಲು ಅನುಕೂಲ ಮಾಡಿಕೊಡಲು ಮುಂದಾದ ಪೊಲೀಸರು ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ನಿಯಂತ್ರಿಸಲು ತೊಡಗಿದರು. ಇದೇ ಸಂದರ್ಭದಲ್ಲಿ ರಸ್ತೆಯಲ್ಲಿ ಬಿದ್ದ ಕಾರ್ಯಕರ್ತನ ಮೇಲೆ ದೌರ್ಜನ್ಯ ನಡೆಸಲಾಗಿದೆ ಎಂದು ದೂರಲಾಗಿದೆ.
‘ಪೊಲೀಸರು ಜನಸಾಮಾನ್ಯರನ್ನು ರಕ್ಷಿಸುತ್ತಿಲ್ಲ. ಬದಲಾಗಿ ಭ್ರಷ್ಟರನ್ನು ರಕ್ಷಿಸುತ್ತಿದ್ದಾರೆ. ಯುವ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ. ಇದು ಜಾರ್ಜ್ ಫ್ಲಾಯ್ಡ್ ಮೇಲೆ ನಡೆಸಿದ ದೌರ್ಜನ್ಯದ ರೀತಿಯದ್ದಾಗಿದೆ’ ಎಂದು ಮಾಜಿ ಶಾಸಕ ಮತ್ತು ಎಐಸಿಸಿ ಕಾರ್ಯದರ್ಶಿ ಪಿ.ಸಿ. ವಿಷ್ಣುನಾಥ್ ದೂರಿದ್ದಾರೆ.
ಈ ಪ್ರಕರಣದ ಬಗ್ಗೆ ಪೊಲೀಸ್ ಅಧಿಕಾರಿಗಳು ಸ್ಪಷ್ಟನೆ ನೀಡಿಲ್ಲ.
ಅಮೆರಿಕದಲ್ಲಿ ಕಪ್ಪು ಜನಾಂಗದ ವ್ಯಕ್ತಿ ಜಾರ್ಜ್ ಫ್ಲಾಯ್ಡ್, ಪೊಲೀಸ್ ದೌರ್ಜನ್ಯದಲ್ಲಿ ಮೃತಪಟ್ಟ ಬಳಿಕ ವಿಶ್ವದೆಲ್ಲೆಡೆ ವರ್ಣಭೇದ ನೀತಿಯ ವಿರುದ್ಧ ಧ್ವನಿಗಳು ಗಟ್ಟಿಯಾಗಿ ಮೊಳಗಿದವು.
ಆಫ್ರಿಕಾ ಮೂಲದ ಅಮೆರಿಕನ್ ಪ್ರಜೆ, ಜಾರ್ಜ್ ಫ್ಲಾಯ್ಡ್ ಅವರ ಕಸ್ಟಡಿ ಸಾವನ್ನು ಖಂಡಿಸಿ ಆರು ದಿನಗಳಿಂದ ಅಮೆರಿಕದಲ್ಲಿ ನಡೆಯುತ್ತಿರುವ ಪ್ರತಿಭಟನೆಯು ಭಾನುವಾರ ಹಿಂಸಾಚಾರಕ್ಕೆ ತಿರುಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.