ಮುಂಬೈ: ‘ಆಟೊಮೊಬೈಲ್ ಬಿಡಿಭಾಗಗಳ ಡೀಲರ್ ಮನ್ಸುಖ್ ಹಿರಾನಿ ಅವರ ನಿಗೂಢ ಸಾವು ಪ್ರಕರಣದ ತನಿಖೆ ಪೂರ್ಣಗೊಳ್ಳುವವರೆಗೆ ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಅವರನ್ನು ಗುಪ್ತಚರ ಅಪರಾಧ ದಳದಿಂದ ಹೊರಗಿಡಲಾಗಿದೆ’ ಎಂದು ಮಹಾರಾಷ್ಟ್ರದ ಗೃಹಸಚಿವ ಅನಿಲ್ ದೇಶ್ಮುಖ್ ಬುಧವಾರ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಈ ಕುರಿತು ಹೇಳಿಕೆ ನೀಡಿದ ಅವರು, ‘ರಾಜ್ಯ ಸರ್ಕಾರವು ಹಿರಾನಿ ಅವರ ಸಾವಿನ ಪ್ರಕರಣವನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸಲಿದೆ. ತನಿಖೆ ಪೂರ್ಣಗೊಳ್ಳುವವರೆಗೂ ಪೊಲೀಸ್ ಅಧಿಕಾರಿ ಸಚಿನ್ ಅವರನ್ನು ಅಪರಾಧ ದಳದಿಂದ ಹೊರಗಿಡಲಾಗುವುದು. ವಿರೋಧ ಪಕ್ಷದವರ ಬೇಡಿಕೆಯ ಮೇರೆಗೆ ನಾನು ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ’ ಎಂದರು
ರಿಲಯನ್ಸ್ ಸಮೂಹದ ಅಧ್ಯಕ್ಷ ಮುಕೇಶ್ ಅಂಬಾನಿ ಅವರ ಐಷಾರಾಮಿ ಮನೆ ‘ಆಂಟಿಲಿಯಾ’ ಬಳಿ ಅನುಮಾನಾಸ್ಪದವಾಗಿ ನಿಂತಿದ್ದ ಸ್ಕಾರ್ಪಿಯೊ ವಾಹನದಲ್ಲಿ 20 ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿದ್ದವು. ಸ್ಕಾರ್ಪಿಯೊ ನಂಬರ್ ಪ್ಲೇಟ್ನಲ್ಲಿನ ನೋಂದಣಿ ಸಂಖ್ಯೆಯು ಅಂಬಾನಿಯವರ ಭದ್ರತಾ ಪಟ್ಟಿಯ ವಿವರದಲ್ಲಿರುವ ಎಸ್ಯುವಿ ವಾಹನದ ಸಂಖ್ಯೆಯನ್ನು ಹೋಲುತ್ತಿತ್ತು.
ಆಟೊಮೊಬೈಲ್ ಬಿಡಿಭಾಗಗಳ ಡೀಲರ್ ಮನ್ಸುಖ್ ಹಿರಾನಿ ಅವರಿಗೆ ಸೇರಿದ್ದ ಸ್ಕಾರ್ಪಿಯೊ ವಾಹನವನ್ನು ಅಪರಿಚಿತರು ಕದ್ದೊಯ್ದಿದ್ದರು. ಈ ಘಟನೆ ನಡೆದ ಕೆಲ ದಿನಗಳ ಬಳಿಕ ಮನ್ಸುಖ್ ಅವರು ನಿಗೂಢವಾಗಿ ಸಾವನ್ನಪ್ಪಿದ್ದರು.
ಹಿರಾನಿ ಸಾವಿಗೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮಂಗಳವಾರ ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕ ದೇವೇಂದ್ರ ಫಡ್ನವೀಸ್ ಅವರು ಒತ್ತಾಯಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.