ಜಮ್ಮು: ಸೋಮವಾರ ಬೆಳಗಿನ ಜಾವ ಸುರಿದ ಭಾರಿ ಮಳೆಯ ನಡುವೆ ಸಿಡಿಲು ಬಡಿದು ಪುರಾತನ ರಣಬೀರೇಶ್ವರ ದೇವಸ್ಥಾನದ ಒಂದು ಭಾಗ ಕುಸಿದು ಬಿದ್ದಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಧರ್ಮಾರ್ಥ ಟ್ರಸ್ಟ್ ತಿಳಿಸಿದೆ. ಘಟನೆಯಲ್ಲಿ ಯಾರಿಗೂ ಯಾವುದೇ ಪ್ರಾಣಹಾನಿ ಅಥವಾ ಗಾಯವಾಗಿಲ್ಲ ಎಂದು ಮಾಹಿತಿ ನೀಡಿದೆ.
'ಜಮ್ಮುವಿನ ಪುರಾತನ ದೇವಾಲಯವಾದ ಇದು 140 ವರ್ಷಗಳಷ್ಟು ಹಳೆಯದು. ಸಿಡಿಲು ಬಡಿದು ದೇವಾಲಯದ ಮುಂಭಾಗ ಕುಸಿದಿದೆ. ವಿಪತ್ತು ಪರಿಹಾರ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ' ಎಂದು ಧರ್ಮಾರ್ಥ ಟ್ರಸ್ಟ್ನ ಕಾರ್ಯದರ್ಶಿ ಅಶೋಕ್ ಕುಮಾರ್ ಶರ್ಮಾ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಈ ಘಟನೆ ಬಳಿಕ ಜಮ್ಮು ಮುನ್ಸಿಪಲ್ ಕಾರ್ಪೊರೇಶನ್ (ಜೆಎಂಸಿ) ನಗರದ ಎಲ್ಲಾ ಧಾರ್ಮಿಕ ಸ್ಥಳಗಳ ಕಟ್ಟಡಗಳ ಸಾಮರ್ಥ್ಯದ ಬಗ್ಗೆ ಪರಿಶೋಧನೆ ನಡೆಸಲು ತೀರ್ಮಾನಿಸಿದೆ. ಮೇಯರ್ ರಾಜಿಂದರ್ ಶರ್ಮಾ ಈ ನಿರ್ಧಾರ ಕೈಗೊಂಡಿದ್ದಾರೆ.
ಪಿಟಿಐ ಜತೆ ಮಾತನಾಡಿದ ಮೇಯರ್, ' ಧಾರ್ಮಿಕ ಕ್ಷೇತ್ರಗಳಲ್ಲಿರುವ ಕಟ್ಡಡಗಳ ಸ್ಥಿರತೆಯ ಸಾಮರ್ಥ್ಯ ಸದಾ ಒಂದು ಸಮಸ್ಯೆಯಾಗಿದೆ. ಈ ಕುರಿತಂತೆ ಇಂಥ ಧಾರ್ಮಿಕ ಕಟ್ಟಡಗಳ ಸಾಮರ್ಥ್ಯದ ಪರಿಶೀಲನೆ ನಡೆಸಿ ವರದಿ ಸಲ್ಲಿಸಲು ಜೆಎಂಸಿ ಆಯುಕ್ತರಿಗೆ ಸೂಚಿಸಲಾಗಿದೆ ಎಂದು ಅವರು ಹೇಳಿದರು.
ರಣಬೀರೇಶ್ವರ ದೇವಸ್ಥಾನ ಹೊಸ ಸೆಕ್ರೆಟರಿಯೇಟ್ ಬಳಿ ಶಾಲಿಮಾರ್ ರಸ್ತೆಯಲ್ಲಿದೆ. ಇದನ್ನು 1883ರಲ್ಲಿ ಮಹಾರಾಜ ರಣಬೀರ್ ಸಿಂಗ್ ನಿರ್ಮಿಸಿದರು ಎಂಬುವುದು ಇತಿಹಾಸ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.