ನವದೆಹಲಿ: ‘ಕೇಂದ್ರೀಯ ಉತ್ಪಾದನಾ ಘಟಕ’ಗಳಿಂದ (ಸಿಜಿಎಸ್) ಹಂಚಿಕೆಯಾಗದ ವಿದ್ಯುತ್ ಅನ್ನು ಬಳಸಿಕೊಳ್ಳುವಂತೆ ರಾಜ್ಯಗಳಿಗೆ ಇಂಧನ ಸಚಿವಾಲಯ ಮಂಗಳವಾರ ತಿಳಿಸಿದೆ.
ದೇಶದಲ್ಲಿ ಕಲ್ಲಿದ್ದಲು ಕೊರತೆ ಹಾಗೂ ವಿದ್ಯುತ್ ಉತ್ಪಾದನೆಯಲ್ಲಿ ಕಂಡುಬಂದಿರುವ ತೊಂದರೆಯಿಂದಾಗಿ ಗ್ರಾಹಕರಿಗೆ ಸಮಸ್ಯೆ ಆಗಬಾರದು ಎಂಬ ಹಿನ್ನೆಲೆಯಲ್ಲಿ ಈ ಸೂಚನೆ ನೀಡಲಾಗಿದೆ ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ.
‘ಕೆಲವು ರಾಜ್ಯಗಳು ಒಂದೆಡೆ ಗ್ರಾಹಕರಿಗೆ ಸಮರ್ಪಕ ವಿದ್ಯುತ್ ಸರಬರಾಜು ಮಾಡುತ್ತಿಲ್ಲ ಹಾಗೂ ವಿದ್ಯುತ್ ನಿಲುಗಡೆಯನ್ನೂ ಆರಂಭಿಸಿವೆ. ಮತ್ತೊಂದೆಡೆ, ವಿನಿಮಯ ಕೇಂದ್ರಗಳ ಮೂಲಕ ಅಧಿಕ ದರಕ್ಕೆ ವಿದ್ಯುತ್ ಮಾರಾಟ ಮಾಡುತ್ತಿರುವುದು ಕಂಡುಬಂದಿದೆ’ ಎಂದು ಸಚಿವಾಲಯ ತಿಳಿಸಿದೆ.
ವಿದ್ಯುತ್ ಹಂಚಿಕೆಗೆ ಸಂಬಂಧಿಸಿದ ಮಾರ್ಗಸೂಚಿಗಳ ಪ್ರಕಾರ ಸಿಜಿಎಸ್ಗಳಲ್ಲಿನ ಶೇ 15ರಷ್ಟು ವಿದ್ಯುತ್ಅನ್ನು ಹಂಚಿಕೆ ಮಾಡಿರುವುದಿಲ್ಲ. ಈ ರೀತಿ ಹಂಚಿಕೆ ಮಾಡದೇ ಇರುವ ವಿದ್ಯುತ್ಅನ್ನು ಪಡೆದು, ಗ್ರಾಹಕರಿಗೆ ಸರಬರಾಜು ಮಾಡುವಂತೆ ರಾಜ್ಯಗಳಿಗೆ ತಿಳಿಸಲಾಗಿದೆ. ಒಂದು ವೇಳೆ ಉತ್ಪಾದನೆ ಹೆಚ್ಚಿದರೆ, ಕೂಡಲೇ ಕೇಂದ್ರ ಸರ್ಕಾರಕ್ಕೆ ತಿಳಿಸಬೇಕು. ಇದರಿಂದ ಅಗತ್ಯವಿರುವ ರಾಜ್ಯಗಳಿಗೆ ವಿದ್ಯುತ್ ಮರುಹಂಚಿಕೆ ಮಾಡಲು ಅನುಕೂಲವಾಗುತ್ತದೆ ಎಂದು ಸೂಚಿಸಿದ್ದಾಗಿ ಸಚಿವಾಲಯ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.