ADVERTISEMENT

ಕ್ಷಮೆ ಕೇಳಿದ ಬಿಜೆಪಿ ಸಂಸದೆ ಪ್ರಜ್ಞಾ ಠಾಕೂರ್‌

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2019, 19:15 IST
Last Updated 29 ನವೆಂಬರ್ 2019, 19:15 IST
 ಲೋಕಸಭೆಯಲ್ಲಿ ಪ್ರಜ್ಞಾ
 ಲೋಕಸಭೆಯಲ್ಲಿ ಪ್ರಜ್ಞಾ   

ನವದೆಹಲಿ:ಗಾಂಧೀಜಿ ಹಂತಕ ನಾಥೂರಾಮ್‌ ಗೋಡ್ಸೆಯನ್ನು ಹೊಗಳಿದ ಬಿಜೆಪಿ ಸಂಸದೆ ಪ್ರಜ್ಞಾ ಠಾಕೂರ್‌, ವಿರೋಧ ಪಕ್ಷಗಳ ಬಿರುಸಿನ ಪ್ರತಿಭಟನೆಯಿಂದಾಗಿ ಲೋಕಸಭೆಯಲ್ಲಿ ಶುಕ್ರವಾರ ಕ್ಷಮೆ ಕೇಳಿದ್ದಾರೆ.

ಗೋಡ್ಸೆಗೆ ಸಂಬಂಧಿಸಿದ ಹೇಳಿಕೆಗೆ ಕ್ಷಮೆ ಕೇಳಿದ ಪ್ರಜ್ಞಾ, ತಮ್ಮನ್ನು ‘ಭಯೋತ್ಪಾದಕಿ’ ಎಂದು ಕರೆದ ಕಾಂಗ್ರೆಸ್‌ ಮುಖಂಡ ರಾಹುಲ್‌ಗಾಂಧಿ ವಿರುದ್ಧ ಹರಿಹಾಯ್ದರು. ವಿರೋಧ ಪಕ್ಷಗಳ ಸದಸ್ಯರು ಈ ಕ್ಷಮೆ ಯಾಚನೆಯನ್ನು ಒಪ್ಪಿಕೊಳ್ಳಲಿಲ್ಲ. ಕ್ಷಮೆ ಕೇಳುವು
ದರ ಜತೆಗೆ ಅವರು ಇತರ ವಿಚಾರಗಳನ್ನೂ ಪ್ರಸ್ತಾಪಿಸಿದ್ದಾರೆ. ಹಾಗಾಗಿ, ಇದು ಬೇಷರತ್‌ ಕ್ಷಮೆಯಾಚನೆ ಅಲ್ಲ ಎಂದು ವಿರೋಧ ಪಕ್ಷಗಳ ಸದಸ್ಯರು ಗದ್ದಲ ಮುಂದುವರಿಸಿದರು.

ಹಾಗಾಗಿ, ಲೋಕಸಭೆಯ ಸ್ಪೀಕರ್‌ ಓಂ ಬಿರ್ಲಾ ಅವರು ಸರ್ವ ಪಕ್ಷಗಳ ಸಭೆ ನಡೆಸಿದರು. ಸಭೆಯ ಬಳಿಕ ಸದನ ಆರಂಭವಾದಾಗ ಪ್ರಜ್ಞಾ ಎರಡನೇ ಬಾರಿಗೆ ಕ್ಷಮೆ ಕೇಳಿದರು. ಆದರೆ, ಅವರು ನೇರವಾಗಿ ಕ್ಷಮೆ ಕೇಳುವ ಬದಲು ಬೇರೆಏನನ್ನೋ ಹೇಳಲು ಹೊರಟರು.

ADVERTISEMENT

ತಕ್ಷಣವೇ ಮಧ್ಯಪ್ರವೇಶಿಸಿದ ಸ್ಪೀಕರ್‌, ಏನು ಹೇಳಬೇಕೆಂದು ಸಭೆಯಲ್ಲಿ ನಿರ್ಧಾರ ಆಗಿದೆಯೋ ಅಷ್ಟು ಹೇಳುವಂತೆ ತಾಕೀತು ಮಾಡಿ
ದರು. ಅದಕ್ಕೂ ಮೊದಲು, ಪ್ರಜ್ಞಾ ಅವರನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿ ವಿರೋಧ ಪಕ್ಷಗಳ ಸದಸ್ಯರು ಭಾರಿ ಗದ್ದಲ ನಡೆಸಿದರು. ಅವರು ಕ್ಷಮೆ ಕೇಳಿದರೂ, ತಮ್ಮ ಹೇಳಿಕೆಯನ್ನು ತಿರುಚಲಾಗಿದೆ ಎಂದು ಹೇಳುತ್ತಲೇ ಇದ್ದರು. ನ್ಯಾಯಾಲಯವು ದೋಷಮುಕ್ತಗೊಳಿಸಿದ್ದರೂ ರಾಹುಲ್‌ ಗಾಂಧಿ ತಮ್ಮನ್ನು ಭಯೋತ್ಪಾದಕಿ ಎಂದು ಕರೆದಿದ್ದಾರೆ ಎಂದು ಹೇಳಿದರು.

‘ಗೋಡ್ಸೆಗೆ ದಿಕ್ಕಾರ’ ಎಂದು ವಿರೋಧ ಪಕ್ಷಗಳ ಸಂಸದರು ಘೋಷಣೆ ಕೂಗುತ್ತಲೇ ಇದ್ದರು. ಸದನ ನಡೆಸುವುದು ಸಾಧ್ಯವೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿತ್ತು. ಹಾಗಾಗಿ, ಹಿರಿಯ ಸದಸ್ಯರ ಜತೆಗೆ ಸ್ಪೀಕರ್ ಸಭೆ ನಡೆಸಿದರು.

ಕ್ಷಮೆ ಯಾಚನೆ

‘ನ. 27ರಂದು ಎಸ್‌ಪಿಜಿ (ತಿದ್ದುಪಡಿ) ಮಸೂದೆ ಮೇಲಿನ ಚರ್ಚೆ ಸಂದರ್ಭದಲ್ಲಿ ನಾಥೂರಾಮ್‌ ಗೋಡ್ಸೆಯನ್ನು ದೇಶಭಕ್ತ ಎಂದು ಕರೆದಿಲ್ಲ. ಆತನ ಹೆಸರನ್ನು ಕೂಡ ನಾನು ಉಲ್ಲೇ
ಖಿಸಿಲ್ಲ. ಹಾಗಿದ್ದರೂ, ಯಾರಿ
ಗಾದರೂ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಮತ್ತು ಕ್ಷಮೆ ಕೇಳುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.