ನವದೆಹಲಿ: ನ್ಯಾಯಮೂರ್ತಿಗಳ (ನಿವೃತ್ತ) ಬಗ್ಗೆ ನೀಡಿದ ಹೇಳಿಕೆಗೆ ವಕೀಲ ಪ್ರಶಾಂತ್ ಭೂಷಣ್ ಅವರು ಕ್ಷಮೆ ಕೇಳುವಂತೆ ಮಾಡುವುದು ಸುಪ್ರೀಂ ಕೋರ್ಟ್ಗೆ ಸಾಧ್ಯವಾಗಿಲ್ಲ.
ಪ್ರಶಾಂತ್ ಅವರಿಗೆ ಎಚ್ಚರಿಕೆ ನೀಡಿ ಬಿಟ್ಟುಬಿಡಬೇಕು ಎಂದು ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಅವರು ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ಪೀಠವನ್ನು ಮಂಗಳವಾರ ಕೋರಿದ್ದಾರೆ. ಆದರೆ, ಪ್ರಶಾಂತ್ ಅವರ ಶಿಕ್ಷೆಯ ಪ್ರಮಾಣದ ತೀರ್ಪನ್ನು ಪೀಠವು ಕಾಯ್ದಿರಿಸಿದೆ.
‘ಇದು ವ್ಯವಸ್ಥೆಗೆ ಸಂಬಂಧಿಸಿದ ಪ್ರಶ್ನೆ. ಪರಸ್ಪರರನ್ನು ನಾವು ನಾಶ ಮಾಡುತ್ತಾ ಹೋದರೆ ಈ ಸಂಸ್ಥೆಯ ಮೇಲೆ ಯಾರಿಗೆ ವಿಶ್ವಾಸ ಉಳಿಯುತ್ತದೆ? ನ್ಯಾಯಾಲಯವು ಏನು ಮಾಡುತ್ತಿದೆ, ಏಕೆ ಮಾಡುತ್ತಿದೆ ಎಂಬುದನ್ನು ಗಮನಿಸಬೇಕು. ನೇರವಾಗಿ ವಾಗ್ದಾಳಿ ನಡೆಸುವುದಲ್ಲ. ನ್ಯಾಯಮೂರ್ತಿಗಳು ಮಾಧ್ಯಮದ ಮುಂದೆ ಹೋಗಿ ತಮ್ಮನ್ನು ಸಮರ್ಥಿಸಿಕೊಳ್ಳಲಾಗದು’ ಎಂದು ಪೀಠ ಹೇಳಿದೆ.
ಪ್ರಶಾಂತ್ ತಮ್ಮ ನಿಲುವಿನಲ್ಲಿ ಯಾವ ಬದಲಾವಣೆಯನ್ನೂ ಮಾಡಿಕೊಂಡಿಲ್ಲ. ‘ತೀವ್ರ ಟೀಕೆಯನ್ನೂ ಸ್ವೀಕರಿಸುವ ಔದಾರ್ಯವನ್ನು ನ್ಯಾಯಾಲಯವು ತೋರಬೇಕು. ಶಿಕ್ಷೆ, ಎಚ್ಚರಿಕೆ ಅಥವಾ ಅವರು ವಕೀಲ ವೃತ್ತಿ ಮುಂದುವರಿಸುವುದಕ್ಕೆ ನಿಷೇಧ ಹೇರದೆ ಪ್ರಕರಣವನ್ನು ಮುಕ್ತಾಯ ಮಾಡಬೇಕು’ ಎಂದು ಪ್ರಶಾಂತ್ ಪರ ವಕೀಲ ರಾಜೀವ್ ಧವನ್ ವಾದಿಸಿದರು.
ಕ್ಷಮೆ ಕೇಳಲು 30 ನಿಮಿಷ ಸಮಯ ಕೊಟ್ಟರೂ ಪ್ರಶಾಂತ್ ಕ್ಷಮೆ ಕೇಳಲಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.