ನವದೆಹಲಿ: ಅತಿ ಗಣ್ಯರ ಪ್ರವಾಸಕ್ಕೆಂದು ವಿಶೇಷವಾಗಿ ವಿನ್ಯಾಸಗೊಳಿಸಿದ ‘ಏರ್ ಇಂಡಿಯಾ ಒನ್–ಬಿ777‘ ವಿಮಾನದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮಂಗಳವಾರ ಚೆನ್ನೈಗೆ ತೆರಳುವ ಮೂಲಕ ಉದ್ಘಾಟಿಸಿದರು ಎಂದು ರಾಷ್ಟ್ರಪತಿ ಭವನದ ಮೂಲಗಳು ತಿಳಿಸಿವೆ.
ರಾಷ್ಟ್ರಪತಿಯವರು ಆಂಧ್ರಪ್ರದೇಶದ ತಿರುಪತಿಗೆ ತೆರಳಿ, ವೆಂಕಟೇಶ್ವರಸ್ವಾಮಿ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸುವವರು ಎಂದು ಭವನದ ಪ್ರಕಟಣೆಯಲ್ಲಿ ತಿಳಿಸಿದೆ.
‘ಅತಿ ಗಣ್ಯರ ಪ್ರವಾಸಕ್ಕಾಗಿ ಭಾರತಕ್ಕೆ ತರಿಸಿರುವ ಎರಡು ವಿಶೇಷ ವಿಮಾನಗಳಲ್ಲಿ, ಇದು ಮೊದಲನೆಯದಾಗಿದೆ. ವಿಮಾನವು ಇಂಧನ ದಕ್ಷತೆಯನ್ನು ಹೊಂದಿದೆ. ಪ್ರಸ್ತುತ ಅತಿ ಗಣ್ಯರಿಗಾಗಿ ಬಳಕೆಯಾಗುತ್ತಿರುವ ಬಿ 747-400 ಗಿಂತ ಹೆಚ್ಚು ದೂರ ಪ್ರಯಾಣಿಸುವ ಸಾಮರ್ಥ್ಯ ಹೊಂದಿದೆ. ಅತ್ಯಾಧುನಿಕ ಒಳಾಂಗಣ ವಿನ್ಯಾಸ ಹೊಂದಿದೆ.‘ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.
ರಾಷ್ಟ್ರಪತಿ, ಉಪರಾಷ್ಟ್ರಪತಿ ಹಾಗೂ ಪ್ರಧಾನಿಯವರ ಪ್ರಯಾಣಕ್ಕಾಗಿ ವಿಶೇಷವಾಗಿ ನಿರ್ಮಿಸಿರುವ ಬೋಯಿಂಗ್(ಬಿ) 777 ಮೊದಲ ವಿಮಾನ ಅಕ್ಟೋಬರ್ 1 ರಂದು ಅಮೆರಿಕದಿಂದ ದೆಹಲಿಗೆ ಬಂದಿಳಿಯಿತು. ಎರಡನೇ ವಿಮಾನ ಅ.26ರಂದು ಬಂದಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.