ADVERTISEMENT

ರಾಷ್ಟ್ರಪತಿಯಿಂದ 47 ಗಣ್ಯರಿಗೆ ಪದ್ಮ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2019, 11:20 IST
Last Updated 11 ಮಾರ್ಚ್ 2019, 11:20 IST
ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು, ಮೋಹನ್ ಲಾಲ್, ಪ್ರಭು ದೇವ, ಮತ್ತು ಭಜರಂಗ್ ಪುನಿಯಾ ಅವರಿಗೆ ಪದ್ಮ ಪುರಸ್ಕಾರ ಪ್ರದಾನ ಮಾಡಿದರು.
ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು, ಮೋಹನ್ ಲಾಲ್, ಪ್ರಭು ದೇವ, ಮತ್ತು ಭಜರಂಗ್ ಪುನಿಯಾ ಅವರಿಗೆ ಪದ್ಮ ಪುರಸ್ಕಾರ ಪ್ರದಾನ ಮಾಡಿದರು.   

ನವದೆಹಲಿ:ಹೆಸರಾಂತ ಚಿತ್ರನಟ ಪ್ರಭುದೇವ, ಸಂಗೀತ ನಿರ್ದೇಶಕ ಶಂಕರ್ ಮಹದೇವನ್, ನಿವೃತ್ತ ವಿದೇಶಾಂಗ ಕಾರ್ಯದರ್ಶಿ ಎಸ್.ಜೈಶಂಕರ್ ಅವರಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಸೋಮವಾರ ಪದ್ಮಶ್ರೀ ನೀಡಿ ಗೌರವಿಸಿದರು.

ಪ್ರಾಚ್ಯ ವಸ್ತು ತಜ್ಞರಾದ ದಿಲೀಪ್ ಚಕ್ರವರ್ತಿ ಮತ್ತು ಹೆಸರಾಂತ ಹೆಮಾಟಾಲಜಿಸ್ಟ್ ಮೊಮೆನ್ ಚಾಂಡಿ ಪದ್ಮಶ್ರೀ ಗೌರವ ಸ್ವೀಕರಿಸಿದರು.
ದೇಶದ ಪ್ರತಿಷ್ಠಿತ ಪ್ರಶಸ್ತಿ ಪದ್ಮ ಪುರಸ್ಕಾರಕ್ಕೆ ಈ ಬಾರಿ ಆಯ್ಕೆಯಾಗಿರುವ 112 ಮಂದಿ ಸಾಧಕರ ಪೈಕಿ 47 ಗಣ್ಯರಿಗೆ ರಾಷ್ಟ್ರಪತಿ ಭವನದಲ್ಲಿ ಪುರಸ್ಕಾರವನ್ನು ಪ್ರದಾನ ಮಾಡಿದರು. ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಇತರ ಗಣ್ಯರು ಇದ್ದರು.

ನಟ ಖಾದರ್‌ ಖಾನ್‌ ಅವರಿಗೆ ಮರಣೋತ್ತರವಾಗಿ ಪದ್ಮಶ್ರೀ, ಅಕಾಲಿದಳ ನಾಯಕ ಸುಖದೇವ್‌ ಸಿಂಗ್‌ ದಿಂಡ್ಸಾ ಮತ್ತು ಹಿರಿಯ ಪತ್ರಕರ್ತ ಕುಲದೀಪ್‌ ನಯ್ಯರ್‌ ಅವರಿಗೆ ಮರಣೋತ್ತರವಾಗಿ ಪದ್ಮಭೂಷಣ ಪ್ರಶಸ್ತಿ ನೀಡಲಾಯಿತು. ನಯ್ಯರ್‌ ಅವರ ಪತ್ನಿ ಪುರಸ್ಕಾರ ಸ್ವೀಕರಿಸಿದರು.

ADVERTISEMENT
ಪದ್ಮ ಪ್ರಶಸ್ತಿ ಪುರಸ್ಕೃತರ ಜತೆ ರಾಷ್ಟ್ರಪತಿ, ಪ್ರಧಾನಿ ಇದ್ದಾರೆ.

ಮಹಾರಾಷ್ಟ್ರದ ರಂಗಕರ್ಮಿ ಬಾಬಾಸಾಹೇಬ್‌ ಪುರಂದರೆ ಯಾನೆ ಬಲ್ವಂತ್‌ ಮೊರೇಶ್ವರ್‌ ಪುರಂದರೆ (ಪದ್ಮವಿಭೂಷಣ), ಬಿಹಾರದ ಹುಕುಂದೇವ್‌ ನಾರಾಯಣ್‌ ಯಾದವ್‌ (ಪದ್ಮಭೂಷಣ), ತಂತ್ರಜ್ಞಾನ ಕ್ಷೇತ್ರ ದೈತ್ಯ ಬಹುರಾಷ್ಟ್ರೀಯ ಕಂಪನಿ ಸಿಸ್ಕೊ ಸಿಸ್ಟಮ್‌ನ ಸಿಇಒ ಜಾನ್‌ ಛೇಂಬರ್ಸ್‌, ಹೆಸರಾಂತ ಡಾನ್ಸರ್‌ ಮತ್ತು ನಟ ಪ್ರಭುದೇವ್‌ (ಪದ್ಮಶ್ರೀ) ಅವರನ್ನೂ ರಾಷ್ಟ್ರಪತಿ ಗೌರವಿಸಿದರು.

ಮಾರ್ಚ್‌ 16ರಂದು ನಡೆಯುವ ಮತ್ತೊಂದು ಸಮಾರಂಭದಲ್ಲಿ ಉಳಿದವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಗಣರಾಜ್ಯೋತ್ಸವದ ಸಂದರ್ಭದಲ್ಲಿ ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರಕಟಿಸಲಾಗಿತ್ತು.

ಗುಜರಾತಿನ ಜುನಾಗಡದ ರೈತ ವಲ್ಲಭಾಭಾಯಿ ವಸ್ರಾಂಬೈ ಮಾರ್ವಾನಿಯಾ ಅವರಿಗೆ ಪದ್ಮಶ್ರೀ ಪುರಸ್ಕಾರವನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಪ್ರದಾನ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.