ADVERTISEMENT

ಚಂದ್ರಯಾನ ಹಿನ್ನಡೆ ಉದಾಹರಿಸಿ ವಿದ್ಯಾರ್ಥಿಗಳಲ್ಲಿ ವಿಶ್ವಾಸ ತುಂಬಿದ ಪ್ರಧಾನಿ ಮೋದಿ

ಪರೀಕ್ಷಾ ಪೆ ಚರ್ಚಾ

ಪಿಟಿಐ
Published 20 ಜನವರಿ 2020, 13:50 IST
Last Updated 20 ಜನವರಿ 2020, 13:50 IST
   

ನವದೆಹಲಿ: 'ಪರೀಕ್ಷಾ ಕೊಠಡಿ ಪ್ರವೇಶಿಸುವ ವೇಳೆ ಯಾವುದೇ ಒತ್ತಡ ಬೇಡ. ಇತರರು ಏನು ಮಾಡುತ್ತಿದ್ದಾರೆ ಎಂಬ ಚಿಂತೆಯೂ ಬೇಡ. ನಿಮ್ಮ ಮೇಲೆ ನಿಮಗೆ ನಂಬಿಕೆ ಇರಲಿ, ಸಿದ್ಧತೆ ಮಾಡಿಕೊಂಡಿರುವುದರ ಬಗ್ಗೆಯಷ್ಟೇ ನಿಮ್ಮ ಗಮನವಿರಲಿ..’

–ಹೀಗೆ,ಪ್ರಧಾನಿ ನರೇಂದ್ರ ಮೋದಿ ವಿದ್ಯಾರ್ಥಿಗಳಿಗೆ ಸರಣಿ ಸಲಹೆಗಳನ್ನು ನೀಡಿದರು.

10ನೇ ತರಗತಿ ಹಾಗೂ ದ್ವಿತೀಯ ಪಿಯು ಪರೀಕ್ಷೆ ಸಮೀಪಿಸುತ್ತಿರುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರೊಂದಿಗೆ ‘ಪರೀಕ್ಷಾ ಪೆ ಚರ್ಚಾ’ ಕಾರ್ಯಕ್ರಮ ನಡೆಸಿದರು.

ADVERTISEMENT

ಪರೀಕ್ಷೆಯ ಸಂದರ್ಭದಲ್ಲಿ ಆತಂಕ, ಸೋಲಿನ ಭೀತಿ ಹಾಗೂಪರೀಕ್ಷಾ ಒತ್ತಡವನ್ನು ಕಡಿಮೆಗೊಳಿಸುವ ಉದ್ದೇಶದಿಂದ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಆಯೋಜಿಸಿದ್ದ ‘ಪರೀಕ್ಷಾ ಪೆ ಚರ್ಚಾ 2020’ ಕಾರ್ಯಕ್ರಮದಲ್ಲಿ ಮೋದಿ ಸಾವಿರಾರು ವಿದ್ಯಾರ್ಥಿಗಳು ಹಾಗೂ ಪೋಷಕರ ಜೊತೆ ಸಂವಾದ ನಡೆಸಿದರು.

ಕಾರ್ಯಕ್ರಮದಲ್ಲಿ ರಾಜಸ್ತಾನ ಮೂಲದ ಯಶಶ್ರೀ ಎಂಬ ವಿದ್ಯಾರ್ಥಿನಿಯ ಪ್ರಶ್ನೆಗೆ ಚಂದ್ರಯಾನದ ಹಿನ್ನಡೆಯನ್ನು ಉದಾಹರಣೆಯನ್ನಾಗಿರಿಸಿಕೊಂಡು ಮೋದಿ ಉತ್ತರಿಸಿದರು. ‘ಚಂದ್ರಯಾನದ ವಿಕ್ರಮ್‌ ಲ್ಯಾಂಡರ್‌ ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಯಲಿದೆಯೇ ಇಲ್ಲವೇ ಎನ್ನುವುದರ ಖಚಿತತೆ ಇಲ್ಲದ ಕಾರಣ, ಅದನ್ನು ವೀಕ್ಷಿಸಲು ನಾನು ತೆರಳಬಾರದು ಎಂದು ನನಗೆ ಹೇಳಲಾಯಿತು. ಆದರೆ ನಾನು ಅಲ್ಲಿ ಇರಲೇಬೇಕಿತ್ತು. ಹಿನ್ನಡೆಯಾದರೆ ಯಶಸ್ಸು ಸಿಗುವುದೇ ಇಲ್ಲ ಎಂದರ್ಥವಲ್ಲ. ಒಮ್ಮೆಯ ಹಿನ್ನಡೆಯು ಗೆಲ್ಲುವ ಪ್ರಯತ್ನ ಮುಂದುವರಿಸುವ ಪ್ರೇರಣೆ ನೀಡಬೇಕು. ಸೋಲಿನಿಂದ ಗೆಲುವಿನ ಪಾಠ ಕಲಿಯಬೇಕು’ ಎಂದು ಸಲಹೆ ನೀಡಿದರು.

ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ:ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದರೆ ಸಾಲುವುದಿಲ್ಲ. ಪರೀಕ್ಷೆಯೇ ಎಲ್ಲ ಎನ್ನುವ ಮನೋಭಾವನೆಯಿಂದ ಹೊರಬರಬೇಕು. ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.