ನವದೆಹಲಿ: ರಾಷ್ಟ್ರೀಯ ನಾಗರಿಕ ನೋಂದಣಿಗೆ (ಎನ್ಆರ್ಸಿ) ಸಂಬಂಧಿಸಿ ಗೃಹ ಸಚಿವ ಅಮಿತ್ ಶಾ ವಿರುದ್ಧ ಸಿಪಿಐ ನಾಯಕ, ರಾಜ್ಯಸಭೆ ಸದಸ್ಯ ಬಿನೊಯ್ ವಿಶ್ವಂ ಹಕ್ಕುಚ್ಯುತಿ ನಿರ್ಣಯದ ನೋಟಿಸ್ ಮಂಡಿಸಿದರು.
‘ಎನ್ಆರ್ಸಿ ಕುರಿತು ಗೃಹ ಸಚಿವರು ಸಂಸತ್ತಿಗೆ ತಪ್ಪು ಮಾಹಿತಿ ನೀಡಿದ್ದಾರೆ. ಈ ಮೂಲಕ ಸಂವಿಧಾನದ ಆಶಯ ಮತ್ತು ದೇಶದ ಜನರ ಸುರಕ್ಷತೆಗೆ ಧಕ್ಕೆ ಉಂಟುಮಾಡಿದ್ದಾರೆ’ ಎಂದು ವಿಶ್ವಂ ಪ್ರತಿಪಾದಿಸಿದ್ದಾರೆ.
ರಾಜ್ಯಸಭೆ ಕಾರ್ಯದರ್ಶಿ ಅವರಿಗೆ ಬರೆಯಲಾದ ಪತ್ರದಲ್ಲಿ, ಅಮಿತ್ ಶಾ ಅವರು ಎನ್ಆರ್ಸಿ ಕುರಿತು ಸಂಸತ್ತಿನ ಉಭಯ ಸದನಗಳಲ್ಲಿ ನೀಡಿದ ಹೇಳಿಕೆ ಹಾಗೂ ಎನ್ಎನ್ಸಿ ಕುರಿತು ಕಳೆದ ಐದು ವರ್ಷಗಳಲ್ಲಿ ಯಾವುದೇ ಚರ್ಚೆಯಾಗಿಲ್ಲ ಎಂಬ ಪ್ರಧಾನಿ ಹೇಳಿಕೆಗೆ ಶಾ ನೀಡಿರುವ ಪ್ರತಿಕ್ರಿಯೆ ಕುರಿತು ಗಮನಸೆಳೆದಿದ್ದಾರೆ.
ಶಾ ಅವರು ರಾಜ್ಯಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಕಳೆದ ನವೆಂಬರ್ 20ರಂದು ಎನ್ಆರ್ಸಿಯನ್ನು ದೇಶದಾದ್ಯಂತ ಹಾಗೂ ಅಸ್ಸಾಂನಲ್ಲಿ ಮತ್ತೆ ಜಾರಿಗೊಳಿಸಲಾಗುವುದು ಎಂದಿದ್ದು, ಎನ್ಆರ್ಸಿ ಪ್ರಕ್ರಿಯೆ ಜಾರಿಯಲ್ಲಿದೆ ಎಂಬ ಇಂಗಿತ ನೀಡಿದ್ದರು. ಲೋಕಸಭೆಯಲ್ಲಿ ಡಿ. 9ರಂದು ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿದ್ದರು.
‘ಆದರೆ, ಪ್ರಧಾನಿ ಹೇಳಿಕೆ ನಂತರ ಶಾ ವಿರುದ್ಧದ ಹೇಳಿಕೆ ನೀಡಿದ್ದರು. ಶಾ ಅವರ ಹೇಳಿಕೆಗಳು ಜನರಲ್ಲಿ ಗೊಂದಲ ಮೂಡಿಸಿವೆ’ ಎಂದು ಅವರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.