ಲಖನೌ: ಲೋಕಸಭೆ ಡೆಪ್ಯುಟಿ ಸ್ಪೀಕರ್ ರಮಾದೇವಿ ವಿರುದ್ಧ ಅಸಾಂವಿಧಾನಿಕ ಪದ ಬಳಸಿ ಕೆಂಗಣ್ಣಿಗೆ ಗುರಿಯಾಗಿದ್ದ ಎಸ್ಪಿ ಸಂಸದ ಆಜಂ ಖಾನ್ ಅವರಿಗೆ ತವರು ಜಿಲ್ಲೆ ರಾಂಪುರದಲ್ಲಿ ಮತ್ತೊಂದಿಷ್ಟು ತೊಂದರೆಗಳು ಜೊತೆಯಾಗಿವೆ.
ಆಜಂ ಅವರ ಮೌಲಾನಾ ಮೊಹಮ್ಮದ್ ಅಲಿ ಜೌಹಾರ್ ಖಾಸಗಿ ವಿಶ್ವವಿದ್ಯಾಲಯದ ಮುಖ್ಯದ್ವಾರವನ್ನು ನೆಲಸಮ ಮಾಡುವಂತೆ ರಾಂಪುರ ಉಪವಿಭಾಗ ಮ್ಯಾಜಿಸ್ಟ್ರೇಟ್ ಕೋರ್ಟ್ ನಿರ್ದೇಶನ ನೀಡಿದೆ. ಮುಖ್ಯದ್ವಾರ ಇರುವ ಸ್ಥಳವು ಲೋಕೋಪಯೋಗಿ ಇಲಾಖೆಗೆ ಸೇರಿದ್ದು ಎಂದಿರುವ ಕೋರ್ಟ್, ಅವರಿಗೆ ₹3.27 ಕೋಟಿ ದಂಡವನ್ನೂ ವಿಧಿಸಿದೆ.
ಹಿಂದಿನ ಎಸ್ಪಿ ಸರ್ಕಾರವು ವಿಶ್ವವಿದ್ಯಾಲಯಕ್ಕೆ 7 ಎಕರೆ ಜಮೀನು ಹಸ್ತಾಂತರಿಸಿದ್ದನ್ನು ಈಚೆಗೆ ಕೋರ್ಟ್ ರದ್ದುಪಡಿಸಿತ್ತು. ಈ ಮಧ್ಯೆ ಲೋಕಸಭಾ ಚುನಾವಣೆಯ ಪ್ರಚಾರ ಸಂದರ್ಭದಲ್ಲಿ ಬಿಜೆಪಿ ನಾಯಕಿ ಜಯಪ್ರದಾ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದ್ದು, ಅಜಂಗೆ ಸಂಕಷ್ಟ ತಂದೊಡ್ಡಿದೆ.
ರಾಂಪುರದ ಲಾಲ್ಪುರ ಪ್ರದೇಶದಲ್ಲಿ ಹಳೆಯ ಸೇತುವೆಯನ್ನು ನೆಲಸಮ ಮಾಡಿದ ಸಂಬಂಧ ಆಜಂ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ ಎಂದು ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.