ADVERTISEMENT

ಟ್ರ್ಯಾಕ್ಟರ್‌ ರ್‍ಯಾಲಿಗೆ ಅವಕಾಶ: ದೆಹಲಿ ಪೊಲೀಸರೇ ನಿರ್ಧಾರ ಕೈಗೊಳ್ಳಲಿ –ಸುಪ್ರೀಂ

ಇದು ಕಾನೂನು ಮತ್ತು ಸುವ್ಯವಸ್ಥೆ ವಿಷಯ– ನ್ಯಾಯಾಲಯ ಅಭಿಮತ

ಪಿಟಿಐ
Published 18 ಜನವರಿ 2021, 7:50 IST
Last Updated 18 ಜನವರಿ 2021, 7:50 IST
.
.   

ನವದೆಹಲಿ: ‘ಗಣರಾಜ್ಯೋತ್ಸವ ದಿನವಾದ ಜನವರಿ 26ರಂದು ರೈತರು ನಡೆಸಲು ಉದ್ದೇಶಿಸಿರುವ ಟ್ರ್ಯಾಕ್ಟರ್‌ ರ್‍ಯಾಲಿ ‘ಕಾನೂನು ಮತ್ತು ಸುವ್ಯವಸ್ಥೆ’ ವಿಷಯವಾಗಿದೆ. ಹೀಗಾಗಿ, ಈ ವಿಷಯವನ್ನು ನಿಭಾಯಿಸುವ ಸಂಪೂರ್ಣ ಅಧಿಕಾರ ದೆಹಲಿ ಪೊಲೀಸರಿಗಿದೆ’ ಸುಪ್ರೀಂ ಕೋರ್ಟ್‌ ಸೋಮವಾರ ಕೇಂದ್ರ ಸರ್ಕಾರಕ್ಕೆ ತಿಳಿಸಿದೆ.

ಗಣರಾಜ್ಯೋತ್ಸವ ಸಂಭ್ರಮಕ್ಕೆ ಅಡ್ಡಿಪಡಿಸುವ ಉದ್ದೇಶದಿಂದ ಆಯೋಜಿಸಿರುವ ಟ್ರ್ಯಾಕ್ಟರ್‌ ರ್‍ಯಾಲಿ ಅಥವಾ ಯಾವುದೇ ರೀತಿಯ ಪ್ರತಿಭಟನೆಗೆ ತಾತ್ಕಾಲಿಕ ಪ್ರತಿಬಂಧಕಾಜ್ಞೆ (ಇಂಜಂಕ್ಷನ್) ನೀಡಬೇಕು ಎಂದು ಕೋರಿ ದೆಹಲಿ ಪೊಲೀಸರ ಮೂಲಕ ಕೇಂದ್ರ ಸರ್ಕಾರ ಅರ್ಜಿ ಸಲ್ಲಿಸಿತ್ತು. ಗಣರಾಜ್ಯೋತ್ಸವ ದಿನದಂದು ನಡೆಯುವ ಪ್ರತಿಭಟನೆ ಮತ್ತು ರ‍್ಯಾಲಿಯಿಂದ ದೇಶಕ್ಕೆ ಮುಜುಗರವಾಗುತ್ತದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು.

ಈ ಬಗ್ಗೆ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್‌.ಎ. ಬೊಬಡೆ ನೇತೃತ್ವದ ಪೀಠವು ಈ ಆದೇಶ ನೀಡಿದೆ.

ADVERTISEMENT

‘ರಾಷ್ಟ್ರ ರಾಜಧಾನಿಯನ್ನು ಯಾರು ಪ್ರವೇಶಿಸಬೇಕು ಎನ್ನುವ ಬಗ್ಗೆ ದೆಹಲಿ ಪೊಲೀಸರೇ ಮೊದಲು ನಿರ್ಧಾರ ಕೈಗೊಳ್ಳಬೇಕು’ ಎಂದು ಪೀಠ ತಿಳಿಸಿದೆ.

‘ಪೊಲೀಸರಿಗೆ ಇರುವ ಅಧಿಕಾರ ಏನು ಮತ್ತು ಯಾವ ರೀತಿ ಚಲಾಯಿಸಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಬೇಕೇ? ನೀವು ಏನು ಮಾಡಬೇಕು ಎನ್ನುವುದನ್ನು ನಾವು ಹೇಳುವುದಿಲ್ಲ’ ಎಂದು ಪೀಠವು ತಿಳಿಸಿದೆ.

‘ಮಿಸ್ಟರ್‌ ಅಟಾರ್ನಿ ಜನರಲ್‌, ಈ ಪ್ರಕರಣದ ವಿಚಾರಣೆಯನ್ನು ಜನವರಿ 20ಕ್ಕೆ ಮುಂದೂಡುತ್ತೇವೆ. ಈ ವಿಷಯವನ್ನು ನಿಭಾಯಿಸುವ ಸಂಪೂರ್ಣ ಅಧಿಕಾರ ನಿಮಗಿದೆ’ ಎಂದು ಪೀಠ ತಿಳಿಸಿದೆ.

ಎಲ್‌.ಎನ್‌. ರಾವ್‌ ಮತ್ತು ವಿನೀತ್‌ ಸರಣ್‌ ಪೀಠದಲ್ಲಿದ್ದ ಇತರ ನ್ಯಾಯಮೂರ್ತಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.