ADVERTISEMENT

ಪುದುಚೇರಿ: ಸಂಪುಟ ವಿಸ್ತರಣೆಗೆ ಬಿಜೆಪಿ ಪಟ್ಟು ಅಡ್ಡಿ

​ಪ್ರಜಾವಾಣಿ ವಾರ್ತೆ
Published 1 ಜೂನ್ 2021, 18:43 IST
Last Updated 1 ಜೂನ್ 2021, 18:43 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಚೆನ್ನೈ: ಆಲ್‌ ಇಂಡಿಯಾ ಎನ್‌.ಆರ್‌ ಕಾಂಗ್ರೆಸ್‌ (ಎಐಎನ್‌ಆರ್‌ಸಿ) ಮುಖ್ಯಸ್ಥ ಎನ್‌. ರಂಗಸ್ವಾಮಿ ಅವರು ಪುದುಚೇರಿಯ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು ಒಂದು ತಿಂಗಳಾದರೂ ಅವರ ಸಂಪುಟ ವಿಸ್ತರಣೆಯಾಗಿಲ್ಲ. ಮಿತ್ರಪಕ್ಷ ಬಿಜೆಪಿ ಜತೆಗೆ ಉಂಟಾಗಿರುವ ಭಿನ್ನಮತವೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

ಉಪಮುಖ್ಯಮಂತ್ರಿ ಸೇರಿದಂತೆ ಒಟ್ಟು ಮೂರು ಸಚಿವ ಸ್ಥಾನಗಳಿಗಾಗಿ ಬಿಜೆಪಿ ಪಟ್ಟು ಹಿಡಿದಿದೆ. ಸ್ಪೀಕರ್‌ ಹುದ್ದೆಯನ್ನೂ ತಮ್ಮ ಪಕ್ಷದವರಿಗೆ ಬಿಟ್ಟುಕೊಡಬೇಕು ಎಂದು ಬಿಜೆಪಿ ಒತ್ತಾಯಿಸುತ್ತಿದೆ. ಬಿಜೆಪಿಯ ಈ ಬೇಡಿಕೆಗೆ ಎನ್‌.ಆರ್‌. ಕಾಂಗ್ರೆಸ್‌ನ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಂಗಸ್ವಾಮಿ ಅವರು ಕೋವಿಡ್‌ಗೆ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ, ಮುಖ್ಯಮಂತ್ರಿಯ ಜತೆಗೆ ಮಾತುಕತೆಯನ್ನೂ ನಡೆಸದೆ ಬಿಜೆಪಿಯು ವಿಧಾನಸಭೆಗೆ ಮೂವರು ಸದಸ್ಯರನ್ನು ನಾಮನಿರ್ದೇಶನ ಮಾಡಿತ್ತು. ರಂಗಸ್ವಾಮಿ ಅವರ ಅಸಮಾಧಾನಕ್ಕೆ ಇದು ಕಾರಣ ಎನ್ನಲಾಗಿದೆ.

ADVERTISEMENT

ಈಚೆಗೆ ನಡೆದ ಚುನಾವಣೆಯಲ್ಲಿ ಎಐಎನ್‌ಆರ್‌ಸಿಯು 10 ಹಾಗೂ ಬಿಜೆಪಿ 6 ಕ್ಷೇತ್ರಗಳಲ್ಲಿ ಜಯಗಳಿಸಿತ್ತು. ಮೂವರು ಸದಸ್ಯರ ನಾಮನಿರ್ದೇಶನದಿಂದ ವಿಧಾನಸಭೆಯಲ್ಲಿ ಬಿಜೆಪಿಯ ಶಕ್ತಿಯು 9ಕ್ಕೆ ಏರಿದೆ.

‘ಬಿಜೆಪಿಗೆ ಎರಡು ಸಚಿವ ಸ್ಥಾನಗಳನ್ನು ನೀಡಲಾಗುವುದು ಮತ್ತು ಉಳಿದ ಮೂರು ಸ್ಥಾನಗಳನ್ನು ತಮ್ಮ ಪಕ್ಷದ ಸದಸ್ಯರಿಗೆ ನೀಡಲಾಗುವುದು. ಸ್ಪೀಕರ್‌ ಹುದ್ದೆಯನ್ನು ಯಾವ ಕಾರಣಕ್ಕೂ ಬಿಜೆಪಿಗೆ ಬಿಟ್ಟು ಕೊಡಲಾಗದು ಎಂದು ರಂಗಸ್ವಾಮಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ’ ಎಂದು ಎಐಎನ್‌ಆರ್‌ಸಿ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.