ಪುಣೆ: ಅಪರೂಪದ ಆನುವಂಶಿಕ ಕಾಯಿಲೆಯಿಂದ ಬಳಲುತ್ತಿದ್ದ ಒಂದು ವರ್ಷದ ಬಾಲಕಿಯ ಚಿಕಿತ್ಸೆಗೆ ನೆರವಿನ ಮಹಾಪೂರವೇ ಹರಿದು ಬಂದಿದ್ದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ.
ಚಿಕಿತ್ಸೆಗೆ ಸ್ಪಂದಿಸದೆ ಬಾಲಕಿ ವೇದಿಕಾ ಶಿಂಧೆ ಭಾನುವಾರ ಸಂಜೆ ಸಾವಿಗೀಡಾಗಿದ್ದಾಳೆ. ಬೆನ್ನುಮೂಳೆಯ ಸ್ನಾಯು ಕ್ಷೀಣತೆಯಿಂದ (ಎಸ್ಎಂಎ) ಬಳಲುತ್ತಿದ್ದ ಈ ಬಾಲಕಿಗೆ ₹16 ಕೋಟಿ ಮೊತ್ತದ ಇಂಜೆಕ್ಷನ್ ಅನ್ನು ಜೂನ್ ತಿಂಗಳಲ್ಲಿ ನೀಡಲಾಗಿತ್ತು.
ಬಾಲಕಿಯ ಅಪರೂಪದ ಕಾಯಿಲೆ ಮತ್ತು ಚಿಕಿತ್ಸೆಗೆ ಅಗತ್ಯವಿದ್ದ ನೆರವು ನೀಡುವ ವಿಷಯ ಸಾಮಾಜಿಕ ಮಾಧ್ಯಮಗಳಲ್ಲಿ ಅಪಾರ ಪರಿಣಾಮ ಬೀರಿತ್ತು. ಇದರಿಂದಾಗಿ, ನೆಟ್ಟಿಗರು ಮತ್ತು ಇತರರು ₹14 ಕೋಟಿ ದೇಣಿಗೆ ನೀಡಿದ್ದರು. ಬಳಿಕ, ಜೂನ್ ತಿಂಗಳಲ್ಲಿ ಇಲ್ಲಿನ ದೀನನಾಥ್ ಮಂಗೇಶ್ಕರ್ ಆಸ್ಪತ್ರೆಯಲ್ಲಿ ಇಂಜೆಕ್ಷನ್ ನೀಡಲಾಗಿತ್ತು.
‘ವೇದಿಕಾ ಆರೋಗ್ಯ ಸ್ಥಿತಿ ಇತ್ತೀಚೆಗೆ ಸುಧಾರಿಸಿತ್ತು. ಅವಳು ಬದುಕುಳಿಯುವ ಆಶಾಭಾವವೂ ಇತ್ತು. ಆದರೆ, ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ’ ಎಂದು ಸಂಬಂಧಿಕರೊಬ್ಬರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.