ಡೆಹ್ರಾಡೂನ್: ತಾಂತ್ರಿಕ ದೋಷದಿಂದಾಗಿ ಪೂರ್ಣಗಿರಿ ಜನ ಶತಾಬ್ದಿ ಎಕ್ಸ್ಪ್ರೆಸ್ ರೈಲು ಸುಮಾರು 35 ಕಿಲೋಮೀಟರ್ ಹಿಮ್ಮುಖವಾಗಿ ಚಲಿಸಿರುವುದಾಗಿ ವರದಿಯಾಗಿದೆ.
ಪ್ರಾಥಮಿಕ ಮಾಹಿತಿಗಳ ಪ್ರಕಾರ ಜಾನುವಾರುಗಳಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಮುಂದಾದಾಗ ರೈಲಿನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡುಹಿಮ್ಮುಖವಾಗಿ ಚಲಿಸಿದೆ. ಈ ವೇಳೆ ಪ್ರಯಾಣಿಕರು ಆತಂಕಗೊಂಡಿದ್ದರು. ರೈಲು 35 ಕಿ.ಮೀ ಚಲಿಸಿ ಖಟಿಮಾ ನಿಲ್ದಾಣದಲ್ಲಿ ಸುರಕ್ಷಿತವಾಗಿ ನಿಲುಗಡೆಯಾಗಿದೆ ಎಂದು ಎಎನ್ಐ ಸುದ್ದಿ ಸಂಸ್ಥೆ ಟ್ವೀಟ್ ಮಾಡಿದೆ.
ಉತ್ತರಾಖಂಡದ ಈಎಕ್ಸ್ಪ್ರೆಸ್ ರೈಲು( ಗಾಡಿ ಸಂಖ್ಯೆ: 05326) ದೆಹಲಿಯಿಂದ ಪಿಲಿಭಿಟ್ ಮಾರ್ಗವಾಗಿ ತಾನಕ್ಪುರ್ಗೆ ಚಲಿಸುತ್ತಿತ್ತು. ತಾನಕ್ಪುರ್ ಸಮೀಪಿಸುತ್ತಿದ್ದಂತೆ ರೈಲಿಗೆ ಹಸುಗಳು ಅಡ್ಡ ಬಂದಿವೆ, ಚಾಲಕ ದಿಢೀರ್ ಬ್ರೇಕ್ ಹಾಕಿದ್ದರಿಂದ ಎಂಜಿನ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು, ರೈಲು ಮುಂದಕ್ಕೆ ಚಲಿಸುವ ಬದಲು ಹಿಮ್ಮುಖವಾಗಿ ಚಲಿಸಿದೆ.
ಕೂಡಲೇ ಕಾರ್ಯಪ್ರವೃತ್ತರಾದ ಸಿಬ್ಬಂದಿಗಳು ರೈಲು ಚಲಿಸುತ್ತಿದ್ದ ಮಾರ್ಗದ ಎಲ್ಲಾ ಗೇಟ್ಗಳನ್ನು ಸಂಚಾರಕ್ಕೆ ಮುಕ್ತಗೊಳಿಸಿ ರೈಲು ನಿಲುಗಡೆಗೆ ಅವಕಾಶ ಕಲ್ಪಿಸಿದ್ದಾರೆ. ರೈಲು ಖಟಿಮಾ ನಿಲ್ದಾಣದಲ್ಲಿ ನಿಲುಗಡೆಯಾಗಿದ್ದು, ಎಲ್ಲ ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.
ಘಟನೆ ಸಂಬಂಧ ರೈಲ್ವೆ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.