ADVERTISEMENT

ಕಾಶ್ಮೀರದ 11 ಕಡೆ ಎನ್‌ಐಎ ಶೋಧ

ಯುವಕರ ಪ್ರೇರೇಪಿಸಿ ಉಗ್ರ ಚಟುವಟಿಕೆಗೆ ಸೇರ್ಪಡೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2022, 15:20 IST
Last Updated 7 ಏಪ್ರಿಲ್ 2022, 15:20 IST
   

ಶ್ರೀನಗರ: ಟಿಆರ್‌ಎಫ್‌ (ದಿ ರಿಸಿಸ್ಟೆನ್ಸ್‌ ಫ್ರಂಟ್‌) ಉಗ್ರ ಸಂಘಟನೆಯು ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂಸಾತ್ಮಕ ಚಟುವಟಿಕೆ ನಡೆಸಲು ಯುವಕರನ್ನು ಪ್ರೇರೇಪಿಸಿ ನೇಮಕಾತಿ ಮಾಡಿಕೊಂಡ ಪ್ರಕರಣ ಸಂಬಂಧ ಗುರುವಾರ ಕಾಶ್ಮೀರದ 11 ಸ್ಥಳಗಳಲ್ಲಿ ರಾಷ್ಟ್ರೀಯ ತನಿಖಾ ದಳವು (ಎನ್‌ಐಎ) ಶೋಧ ಕಾರ್ಯಾಚರಣೆ ನಡೆಸಿದೆ.

‘ಶ್ರೀನಗರ ಜಿಲ್ಲೆಯ ಆರು ಕಡೆ, ಬಾರಾಮುಲ್ಲಾದ ಎರಡು ಕಡೆ, ಆವಂತಿಪೋರಾ, ಬುಡ್ಗಾಂ ಹಾಗೂ ಕುಲ್ಗಾಂ ಜಿಲ್ಲೆಯ ಒಂದೊಂದು ಪ್ರದೇಶದಲ್ಲಿ ಶೋಧ ನಡೆಸಲಾಯಿತು. ಇತ್ತೀಚೆಗೆ ಎನ್‌ಐಎ ₹10 ಲಕ್ಷ ಇನಾಮು ಘೋಷಿಸಿದ ಸಕ್ರಿಯ ಭಯೋತ್ಪಾದಕ ಬಸಿತ್‌ ಅಹ್ಮದ್‌ ದಾರ್‌ ಒಳಗೊಂಡತೆ ಹಲವು ಸ್ಥಳಗಳಲ್ಲಿ ಶೋಧ ನಡೆಸಲಾಯಿತು’ ಎಂದು ಎನ್‌ಐಎ ವಕ್ತಾರರು ತಿಳಿಸಿದರು.

‘ಪಾಕಿಸ್ತಾನ ಮೂಲದ ಲಷ್ಕರ್‌–ಎ–ತೈಬಾ (ಎಲ್‌ಇಟಿ)ಯ ಅಂಗಸಂಸ್ಥೆ ಟಿಆರ್‌ಎಫ್‌ನ ಉಗ್ರ ಚಟುವಟಿಕೆ ಟಿಆರ್‌ಎಫ್‌ ಕಮಾಂಡರ್ ಸಜ್ಜದ್ ಗುಲ್ ಸಂಬಂಧಿಸಿದ ಪ್ರಕರಣ ಇದಾಗಿದೆ. ಸಜ್ಜದ್‌ ಗುಲ್‌ ಹಾಗೂ ಆತನ ಸಹಚರರಾದ ಎಲ್‌ಇಟಿಯ ಕಮಾಂಡರ್‌ಗಳು ಉಗ್ರ ಚಟುವಟಿಕೆಗಳಿಗೆ ನೆರವು ನೀಡುವವರನ್ನು ನೇಮಕ ಮಾಡಿಕೊಳ್ಳುತ್ತಿದ್ದರು. ಅಲ್ಲದೇ ಉಗ್ರರಿಗೆ ಶಸ್ತ್ರಾಸ್ತ್ರಗಳ ಪೂರೈಕೆ ಹಾಗೂ ಇತರೆ ನೆರವು ನೀಡುತ್ತಿದ್ದರು. ಶೋಧ ಕಾರ್ಯಾಚರಣೆ ವೇಳೆ ಶಸ್ತ್ರಾಸ್ತ್ರಗಳು, ಡಿಜಿಟಲ್‌ ಸಾಧನಗಳು, ಸಿಮ್‌ ಕಾರ್ಡ್‌ಗಳು ಹಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಅವರು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.