ನವದೆಹಲಿ: ರಫೇಲ್ ಯುದ್ಧ ವಿಮಾನ ಖರೀದಿಸಲು ಕೈಗೊಂಡ ನಿರ್ಧಾರಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕೇಂದ್ರ ಸರ್ಕಾರ ಮುಚ್ಚಿದ ಲಕೋಟೆಯಲ್ಲಿ ಸುಪ್ರೀಂ ಕೋರ್ಟ್ ಕಾರ್ಯದರ್ಶಿಗಳಿಗೆ ಶನಿವಾರ ಸಲ್ಲಿಸಿದೆ.
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗಯ್ ನೇತೃತ್ವದ ಪೀಠ, ರಫೇಲ್ ಯುದ್ಧ ವಿಮಾನದ ಬೆಲೆ ಹಾಗೂ ತಾಂತ್ರಿಕ ವಿವರಗಳನ್ನು ಬಹಿರಂಗಪಡಿಸದೆ ವಿಚಾರಣೆಯನ್ನು ಅಕ್ಟೋಬರ್ 29ಕ್ಕೆ ಮುಂದೂಡಿದೆ.
ರಫೇಲ್ ಹಗರಣಕ್ಕೆ ಸಂಬಂಧಿಸಿದಂತೆ ಹಿರಿಯ ವಕೀಲ ಪ್ರಶಾಂತ್ ಭೂಷಣ್, ಕೇಂದ್ರದ ಮಾಜಿ ಸಚಿವರಾದ ಯಶವಂತ್ ಸಿನ್ಹಾ ಹಾಗೂ ಅರುಣ್ ಶೌರಿ ಬುಧವಾರ ಮೇಲ್ಮನವಿ ಸಲ್ಲಿಸಿದ್ದರು. ಹಗರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಆದೇಶಿಸಲು ಮನವಿ ಮಾಡಿದ್ದರು.
ಕೇಂದ್ರದ ಈ ನಿರ್ಧಾರವನ್ನು ಟೀಕಿಸುತ್ತಿರುವ ಕಾಂಗ್ರೆಸ್ ರಫೇಲ್ ಖರೀದಿ ದೇಶದ ದೊಡ್ಡ ಹಗರಣ ಎಂದು ಕಿಡಿ ಕಾರಿದೆ.2012ರಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ರಫೇಲ್ ಯುದ್ಧವಿಮಾನಗಳನ್ನು ಫ್ರಾನ್ಸ್ ತಂತ್ರಜ್ಞಾನ ಬಳಸಿಕೊಂಡು ಸರ್ಕಾರಿ ಸ್ವಾಮ್ಯದ ಎಚ್ಎಎಲ್ ಸಹಭಾಗಿತ್ವದಲ್ಲಿ ತಯಾರಿಸುವ ಪ್ರಸ್ತಾಪವನ್ನಿಡಲಾಗಿತ್ತು.ಫ್ರಾನ್ಸ್ನಿಂದ 18 ಯುದ್ಧ ವಿಮಾನಗಳನ್ನು ಖರೀದಿಸಿ, ಎಚ್ಎಎಲ್ನಿಂದ 108ಯುದ್ಧ ವಿಮಾನ ತಯಾರಿಸಲು ಕಾಂಗ್ರೆಸ್ ಉದ್ದೇಶಿಸಿತ್ತು. ಅದರಂತೆಪ್ರತಿ ಯುದ್ಧ ವಿಮಾನಕ್ಕೆಕೇವಲ ₹ 526 ಕೋಟಿ ವೆಚ್ಚವಾಗುತ್ತಿತ್ತು.
ಅಧಿಕಾರಕ್ಕೇರಿದ ನಂತರ ಕಾಂಗ್ರೆಸ್ ಸರ್ಕಾರದ ಯೋಜನೆಯನ್ನು ಕೈಬಿಟ್ಟಬಿಜೆಪಿ, ಪ್ರಾನ್ಸ್ನ ‘ಡಸಾಲ್ಟ್ ಏವಿಯೇಷನ್’ ಕಂಪನಿಯಿಂದ 36 ಯುದ್ಧ ವಿಮಾನ ಖರೀದಿಸಲು ತೀರ್ಮಾನಿಸಿದೆ.ಪ್ರತಿ ವಿಮಾನಕ್ಕೆ ₹ 1670 ಕೋಟಿ ವೆಚ್ಚವಾಗಲಿದೆ. ಹೀಗಾಗಿ ವಿಮಾನ ಖರೀದಿಯಲ್ಲಿ ದೊಡ್ಡ ಹಗರಣ ನಡೆದಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.