ADVERTISEMENT

ಬಿಜೆಪಿಯಿಂದ ಎಲ್ಲವೂ ಧ್ವಂಸ: ರಾಹುಲ್‌

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2019, 19:30 IST
Last Updated 3 ಆಗಸ್ಟ್ 2019, 19:30 IST
   

ನವದೆಹಲಿ: ಭಾರತದ ಅರ್ಥವ್ಯವಸ್ಥೆಯ ಬಗ್ಗೆ ಉದ್ಯಮ ಮುಖಂಡರು ಕಳವಳ ವ್ಯಕ್ತಪಡಿಸಿದ ಬೆನ್ನಿಗೇ ಕಾಂಗ್ರೆಸ್ ಪಕ್ಷವೂ ಕೇಂದ್ರ ಸರ್ಕಾರದ ವಿರುದ್ಧ ಟೀಕೆ ಮಾಡಿದೆ. ದಶಕಗಳಿಂದ ಮುತುವರ್ಜಿ ವಹಿಸಿ ಕಟ್ಟಿದ ಎಲ್ಲವನ್ನೂ ಬಿಜೆಪಿ ಆಳ್ವಿಕೆಯು ನಾಶ ಮಾಡುತ್ತಿದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ.

ಅರ್ಥ ವ್ಯವಸ್ಥೆಯ ಹಿಂಜರಿತ, ವಾಹನ ತಯಾರಿಕಾ ಉದ್ಯಮ ಕುಸಿತ, ಉಕ್ಕು ಕಂಪನಿಗಳ ಬಿಕ್ಕಟ್ಟು, ಬಿಎಸ್‌ಎನ್‌ಎಲ್‌ ಮತ್ತು ಎಂಟಿಎನ್‌ಎಲ್‌ ಸಿಬ್ಬಂದಿಗೆ ಸಿಗದ ವೇತನ ಮತ್ತು ರೈಲ್ವೆಯಲ್ಲಿ ಉದ್ಯೋಗ ಕಡಿತದ ವಿಚಾರಗಳ ಬಗ್ಗೆ ಉದ್ಯಮ ಮುಖಂಡರು ಇತ್ತೀಚೆಗೆ ಕಳವಳ ವ್ಯಕ್ತಪಡಿಸಿದ್ದರು.

ಜುಲೈ ತಿಂಗಳ ವಾಹನ ಮಾರಾಟವು ಕಳೆದ ಎರಡು ದಶಕಗಳಲ್ಲಿಯೇ ಅತ್ಯಂತ ಕೆಳಮಟ್ಟಕ್ಕೆ ಕುಸಿದಿರುವುದು ಮತ್ತು ಇತರ ವಿಚಾರಗಳ ಬಗ್ಗೆ ಎಲ್‌ ಎಂಡ್‌ ಟಿ ಕಂಪನಿಯ ಎ.ಎಂ. ನಾಯ್ಕ್‌ ನೀಡಿದ್ದ ಹೇಳಿಕೆಯ ಮಾಧ್ಯಮ ವರದಿಯ ಪ್ರತಿಯನ್ನು ಲಗತ್ತಿಸಿ ರಾಹುಲ್‌ ಟ್ವೀಟ್‌ ಮಾಡಿದ್ದಾರೆ. ರೈಲ್ವೆ ಸಿಬ್ಬಂದಿಗೆ ಸ್ವಯಂ ನಿವೃತ್ತಿಯ ಬಗ್ಗೆ ಡೆಕ್ಕನ್‌ ಹೆರಾಲ್ಡ್‌ ಪತ್ರಿಕೆ ಪ್ರಕಟಿಸಿದ್ದ ವರದಿಯನ್ನೂ ಅವರು ಲಗತ್ತಿಸಿದ್ದಾರೆ.

ADVERTISEMENT

ಸರ್ಕಾರದ ನೀತಿಗಳು ಮತ್ತು ಕ್ರಮಗಳಿಂದಾಗಿ ಅರ್ಥ ವ್ಯವಸ್ಥೆ ಸ್ಥಗಿತವಾಗಿದೆ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಹೇಳಿದ್ದಾರೆ.

ಉದ್ಯೋಗದ ಮಾತಿಲ್ಲ
‘ಕಾರು ಮಾರಾಟವು ಶೇ 15ರಿಂದ ಶೇ 48ಕ್ಕೆ ಕುಸಿತ! 30 ಉಕ್ಕು ತಯಾರಿಕಾ ಕಂಪನಿಗಳು ಬಾಗಿಲು ಮುಚ್ಚಿವೆ! ಸಾಮಾಜಿಕ ಬಿರುಕುಗಳು, ದ್ವೇಷಾಪರಾಧ ಮತ್ತು ಹಿಂಜರಿತದ ಬಗ್ಗೆ ಉದ್ಯಮ ದಿಗ್ಗಜರಾದ ರಾಹುಲ್‌ ಬಜಾಜ್‌, ಆದಿ ಗೋದ್ರೆಜ್‌, ನಾರಾಯಣಮೂರ್ತಿ ಅವರು ಸರ್ಕಾರವನ್ನು ಎಚ್ಚರಿಸಿದ್ದಾರೆ.

ಹಾಗಿದ್ದರೂ ಮೋದಿ ನೇತೃತ್ವದ ಎರಡನೇ ಅವಧಿಯ ಸರ್ಕಾರ ಉದ್ಯೋಗದ ಬಗ್ಗೆ ಮಾತನಾಡುವ ಬದಲು ಅಣಕ, ಅಭಿವೃದ್ಧಿ ಬದಲು ವಿಭಜನೆಯತ್ತ ಗಮನ ಕೇಂದ್ರೀಕರಿಸಿದೆ. ಇದು ನವಭಾರತ!’ ಎಂದು ಕಾಂಗ್ರೆಸ್‌ ವಕ್ತಾರ ರಣದೀಪ್‌ ಸುರ್ಜೇವಾಲಾ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.