ADVERTISEMENT

ಪೋಸ್ಟರ್‌ಗಳಲ್ಲಿ ರಾಹುಲ್‌ ಚಿತ್ರಕ್ಕೆ ಅಗ್ರಸ್ಥಾನ: ಪಕ್ಷದ ಅಧ್ಯಕ್ಷರಾಗಲು ಒತ್ತಾಯ

ಜೈಪುರದಲ್ಲಿ ಕಾಂಗ್ರೆಸ್‌ನಿಂದ ನಾಳೆ ರ‍್ಯಾಲಿ * ರಾರಾಜಿಸುತ್ತಿರುವ ಬ್ಯಾನರ್‌ಗಳು

ಪಿಟಿಐ
Published 11 ಡಿಸೆಂಬರ್ 2021, 11:24 IST
Last Updated 11 ಡಿಸೆಂಬರ್ 2021, 11:24 IST
ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ   

ಜೈಪುರ: ಹಣದುಬ್ಬರ ವಿರೋಧಿಸಿ ರಾಷ್ಟ್ರ ಮಟ್ಟದ ರ‍್ಯಾಲಿ ಹಮ್ಮಿಕೊಳ್ಳುವ ಮೂಲಕ ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಕಾಂಗ್ರೆಸ್‌ ಮುಂದಾಗಿರುವ ನಡುವೆಯೇ, ರಾಹುಲ್‌ ಗಾಂಧಿಯವರು ಪಕ್ಷವನ್ನು ಮುನ್ನಡೆಸಬೇಕು ಎಂಬ ಧ್ವನಿ ಜೋರಾಗುತ್ತಿದೆ.

ರಾಜಧಾನಿ ಜೈಪುರದ ವಿದ್ಯಾಧರನಗರದಲ್ಲಿರುವ ಕ್ರೀಡಾಂಗಣದಲ್ಲಿ ‘ಮೆಹಂಗಾಯಿ ಹಟಾವೊ ಮಹಾ ರ‍್ಯಾಲಿ’ ಭಾನುವಾರ ನಡೆಯಲಿದೆ. ಈ ಹಿನ್ನೆಲೆಯಲ್ಲಿ ನಗರದ ವಿವಿಧ ಸ್ಥಳಗಳಲ್ಲಿ ಕಟ್ಟಲಾಗಿರುವ ಬ್ಯಾನರ್‌ಗಳಲ್ಲಿ, ಅಂಟಿಸಲಾಗಿರುವ ಪೋಸ್ಟರ್‌ಗಳಲ್ಲಿ ರಾಹುಲ್‌ ಗಾಂಧಿಯವರ ಚಿತ್ರವೇ ಕೇಂದ್ರಬಿಂದುವಾಗಿರುವುದು ಈ ಮಾತಿಗೆ ಪುಷ್ಟಿ ನೀಡುವಂತಿದೆ.

ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ಮುಖ್ಯಮಂತ್ರಿ ಅಶೋಕ ಗೆಹಲೋತ್‌, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಪ್ರಿಯಾಂಕಾ ಗಾಂಧಿ ವಾದ್ರಾ, ಕೆ.ಸಿ.ವೇಣುಗೋಪಾಲ್, ಅಜಯ್ ಮಾಕನ್ ಹಾಗೂ ಕಾಂಗ್ರೆಸ್‌ನ ರಾಜ್ಯ ಘಟಕದ ಅಧ್ಯಕ್ಷ ಗೋವಿಂದ್ ಸಿಂಗ್ ಡೋಟಾಸರಾ ಅವರ ಚಿತ್ರಗಳನ್ನು ಈ ಬ್ಯಾನರ್‌, ಪೋಸ್ಟರ್‌ಗಳಲ್ಲಿ ಅಳವಡಿಸಲಾಗಿದೆ. ಆದರೆ, ರಾಹುಲ್‌ ಗಾಂಧಿ ಅವರ ಚಿತ್ರಕ್ಕೆ ಮಾತ್ರ ಪ್ರಮುಖ ಸ್ಥಾನ ನೀಡಲಾಗಿದೆ.

ADVERTISEMENT

ಈ ಕುರಿತು ಪ್ರತಿಕ್ರಿಯಿಸಿದ ಪಕ್ಷದ ಹಿರಿಯ ಮುಖಂಡ ವಿ.ನಾರಾಯಣಸ್ವಾಮಿ, ‘ರಾಹುಲ್‌ ಗಾಂಧಿ ನಮ್ಮ ನಾಯಕ. ಅವರೇ ಪಕ್ಷದ ಅಧ್ಯಕ್ಷರಾಗಬೇಕು ಎಂಬುದು ಪ್ರತಿಯೊಬ್ಬರ ಅಪೇಕ್ಷೆಯಾಗಿದೆ’ ಎಂದು ಹೇಳಿದರು.

‘ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಅವರು ರ‍್ಯಾಲಿಯಲ್ಲಿ ಪಾಲ್ಗೊಳ್ಳುವರು. ಸೋನಿಯಾ ಗಾಂಧಿಯವರು ಪಾಲ್ಗೊಳ್ಳುವ ಬಗ್ಗೆ ಭಾನುವಾರವೇ ತಿಳಿಯಲಿದೆ’ ಎಂದು ಪ್ರದೇಶ ಕಾಂಗ್ರೆಸ್‌ ಸಮಿತಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.