ಅಮಿತ್ ಶಾ
ಪಟ್ನಾ/ಅರರಿಯ: ‘ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರು ಒಳನುಸುಳುಕೋರರ ಮತದಾನದ ಹಕ್ಕನ್ನು ರಕ್ಷಿಸಲು ಯತ್ನಿಸುತ್ತಿದ್ದಾರೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಪಿಸಿದರು.
ಅರರಿಯ ಜಿಲ್ಲೆಯಲ್ಲಿ ಶನಿವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಬಿಹಾರದಲ್ಲಿ ಶೀಘ್ರದಲ್ಲಿಯೇ ವಿಧಾನಸಭೆ ಚುನಾವಣೆ ಘೋಷಣೆ ಯಾಗಲಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪಕ್ಷದ ಕಾರ್ಯಕರ್ತ ರನ್ನು ಉದ್ದೇಶಿಸಿ ಎರಡು ದಿನಗಳಿಂದ ಸಭೆಗಳನ್ನು ನಡೆಸಿದ್ದರು. ಮುಸ್ಲಿಂ ಜನಸಂಖ್ಯೆ ಅಧಿಕವಿರುವ ರಾಜ್ಯದ ಸೀಮಾಂಚಲ ಪ್ರದೇಶದ ಕಾರ್ಯಕ್ರತರೇ ಈ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದರು.
‘ಮತದಾರರ ಪಟ್ಟಿಯಿಂದ ಒಳನುಸುಳುಕೋರರ ಹೆಸರನ್ನು ತೆಗೆದು ಹಾಕಲು ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯನ್ನು (ಎಸ್ಐಆರ್) ಚುನಾವಣಾ ಆಯೋಗ ಕೈಗೊಂಡಿತ್ತು. ಇದನ್ನೇ ವಿರೋಧಿಸಿ ರಾಹುಲ್ ಅವರು ಇತ್ತೀಚೆಗೆ ಇಲ್ಲಿ ಯಾತ್ರೆ ನಡೆಸಿದ್ದರು’ ಎಂದರು.
‘ಒಳನುಸುಳುಕೋರರ ಮತದಾನದ ಹಕ್ಕನ್ನು ರಕ್ಷಿಸಿಕೊಳ್ಳಲು ರಾಹುಲ್, ಲಾಲು ಮತ್ತವರ ಕೂಟ ಯತ್ನಿಸುತ್ತಿದೆ. ಸೀಮಾಂಚಲ ಪ್ರದೇಶದ ನಿಮ್ಮನ್ನು ಕೇಳುತ್ತಿದ್ದೇನೆ. ನೀವು ಇದಕ್ಕೆ ಅನುವು ಮಾಡಿಕೊಡುತ್ತೀರೇ?’ ಎಂದು ಶಾ ಅವರು ಕಾರ್ಯಕರ್ತರನ್ನು ಕೇಳಿದರು. ಇದಕ್ಕೆ ‘ಇಲ್ಲ’ ಎಂದು ದೊಡ್ಡ ಸ್ವರದಲ್ಲಿ ಕಾರ್ಯಕರ್ತರು ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.