ADVERTISEMENT

ರಾಹುಲ್‌ ಬಹಿರಂಗ ಕ್ಷಮೆಗೆ ಬಿಜೆಪಿ ಆಗ್ರಹ

ಪಿಟಿಐ
Published 16 ಮಾರ್ಚ್ 2023, 13:53 IST
Last Updated 16 ಮಾರ್ಚ್ 2023, 13:53 IST
ಪೀಯೂಷ್‌ ಗೋಯಲ್‌
ಪೀಯೂಷ್‌ ಗೋಯಲ್‌   

ನವದೆಹಲಿ: ‘ಬ್ರಿಟನ್‌ ಪ್ರವಾಸದ ವೇಳೆ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯ ಕುರಿತು ಟೀಕೆ ಮಾಡಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಅದಕ್ಕಾಗಿ ಬಹಿರಂಗ ಕ್ಷಮೆಯಾಚಿಸಬೇಕು’ ಎಂದು ಬಿಜೆಪಿ ಗುರುವಾರ ಆಗ್ರಹಿಸಿದೆ.

‘ರಾಹುಲ್‌ ಹೇಳಿಕೆಯಿಂದ ಇಡಿ ದೇಶಕ್ಕೇ ಅವಮಾನವಾಗಿದೆ. ಸಂಸದರಷ್ಟೇ ಅಲ್ಲದೆ ಇಡೀ ದೇಶದ ನಾಗರಿಕರು ಕೆರಳಿದ್ದಾರೆ. ಅವರು ಕ್ಷಮೆಯಾಚಿಸಬೇಕೆಂದು ಬಿಜೆಪಿ ಜೊತೆ ಇತರ ಪಕ್ಷಗಳೂ ಒತ್ತಾಯಿಸುತ್ತಿವೆ’ ಎಂದು ಕೇಂದ್ರ ಸಚಿವರಾದ ಪೀಯೂಷ್‌ ಗೋಯಲ್‌ ಹಾಗೂ ಪ್ರಲ್ಹಾದ ಜೋಶಿ ಹೇಳಿದ್ದಾರೆ.

‘ರಾಹುಲ್‌ ಅವರು ಆಧಾರರಹಿತ ಹಾಗೂ ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ತಮ್ಮಿಂದ ಆಗಿರುವ ತಪ್ಪಿಗಾಗಿ ಅವರು ಕ್ಷಮೆ ಕೇಳಲೇಬೇಕು’ ಎಂದು ಗೋಯಲ್‌ ಒತ್ತಾಯಿಸಿದ್ದಾರೆ.

ADVERTISEMENT

‘ಭಾರತದ ಘನತೆಗೆ ಹಿಂದೆಂದೂ ಈ ಬಗೆಯ ಚ್ಯುತಿ ಉಂಟಾಗಿರಲಿಲ್ಲ. ರಾಜಕೀಯದಲ್ಲಿ ಭಿನ್ನಾಭಿಪ್ರಾಯಗಳು ಸಹಜ. ಹಾಗಂತ ವಿದೇಶಿ ಶಕ್ತಿಗಳ ಹಸ್ತಕ್ಷೇಪಕ್ಕೆ ಆಗ್ರಹಿಸುವುದು ಸರಿಯಲ್ಲ. ಅದಕ್ಕಿಂತಲೂ ಘನಘೋರವಾದ ಅಪರಾಧ ಮತ್ತೊಂದಿಲ್ಲ’ ಎಂದು ಜೋಶಿ ಹೇಳಿದ್ದಾರೆ.

‘ರಾಹುಲ್‌ ಹೇಳಿಕೆಯು ಪ್ರಜಾಪ್ರಭುತ್ವದ ಯಶಸ್ಸು ಹಾಗೂ ವೈಫಲ್ಯದ ಅಳತೆಗೋಲು ಅಲ್ಲ. ವಿದೇಶಿ ನೆಲಗಳಲ್ಲಿ ನಿಂತುಕೊಂಡು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಕೀಳಾಗಿ ಮಾತನಾಡುವುದನ್ನು ಅವರು ಹವ್ಯಾಸ ಮಾಡಿಕೊಂಡಿದ್ದಾರೆ’ ಎಂದು ಬಿಜೆಪಿ ನಾಯಕ ರವಿಶಂಕರ್‌ ಪ್ರಸಾದ್‌ ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.