ರಾಹುಲ್ ಗಾಂಧಿ
ನವದೆಹಲಿ: ಅಮೆರಿಕದ ಸುಂಕದಿಂದಾಗಿ ಭಾರತದ ಜವಳಿ ರಫ್ತುದಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಭಾರತವು ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವಾಗ ಕಡ್ಡಾಯವಾಗಿ ಇಲ್ಲಿನ ವ್ಯಾಪಾರೋದ್ಯಮ ಮತ್ತು ಕಾರ್ಮಿಕರ ಹಿತಾಸಕ್ತಿಗೆ ಆದ್ಯತೆ ನೀಡಬೇಕು’ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
‘ನರೇಂದ್ರ ಮೋದಿಯವರು ಸುಂಕಗಳ ಹೇರಿಕೆ ಬಗ್ಗೆ ಮಾತನಾಡಲಿಲ್ಲ. 4.5 ಕೋಟಿಗೂ ಹೆಚ್ಚು ಉದ್ಯೋಗಗಳು ಮತ್ತು ಲಕ್ಷಾಂತರ ಮೊತ್ತದ ವ್ಯವಹಾರಗಳು ಅಪಾಯದಲ್ಲಿದ್ದಾಗ ಯಾವುದೇ ಪರಿಹಾರವನ್ನು ನೀಡಲಿಲ್ಲ’ ಎಂದು ಆರೋಪಿಸಿದ ರಾಹುಲ್ ಗಾಂಧಿ, ‘ಮೋದಿಯವರೇ, ಈ ಎಲ್ಲ ಬೆಳವಣಿಗೆಗಳಿಗೂ ನೀವೇ ಜವಾಬ್ದಾರರು; ದಯವಿಟ್ಟು ಈ ವಿಷಯದ ಬಗ್ಗೆ ಗಮನ ಹರಿಸಿ’ ಎಂದು ಹೇಳಿದ್ದಾರೆ.
ಇತ್ತೀಚೆಗೆ ಹರಿಯಾಣದ ಗಾರ್ಮೆಂಟ್ ಕಾರ್ಖಾನೆಗೆ ಭೇಟಿ ನೀಡಿದ ವಿಡಿಯೊವನ್ನು ‘ಎಕ್ಸ್’ನಲ್ಲಿ ಹಂಚಿಕೊಂಡಿರುವ ಅವರು, ‘ಅಮೆರಿಕ ವಿಧಿಸುತ್ತಿರುವ ಶೇ 50ರಷ್ಟು ಸುಂಕವು ಅನಿಶ್ಚಿತತೆಯಲ್ಲಿರುವ ಭಾರತೀಯ ಜವಳಿ ರಫ್ತುದಾರರಿಗೆ ತೀವ್ರ ಹಾನಿಯುಂಟು ಮಾಡುತ್ತಿದೆ. ಕಾರ್ಖಾನೆಗಳು ಮುಚ್ಚುತ್ತಿವೆ. ಉದ್ಯೋಗ ನಷ್ಟ ಮತ್ತು ಕಡಿಮೆಯಾದ ಬೇಡಿಕೆಗಳು ನಮ್ಮ ದೇಶದ ‘ಸತ್ತ ಆರ್ಥಿಕತೆ’ಯ ವಾಸ್ತವಾಂಶಗಳು’ ಎಂದು ವಿವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.