ADVERTISEMENT

ವಯನಾಡಿನಲ್ಲಿ ರಾಹುಲ್‌ ಗಾಂಧಿಗೆ ಅದ್ದೂರಿ ಸ್ವಾಗತ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2023, 15:43 IST
Last Updated 12 ಆಗಸ್ಟ್ 2023, 15:43 IST
ತಮಿಳುನಾಡಿನ ನೀಲಗಿರಿ ಜಿಲ್ಲೆಯ ಮುತ್ತುನಾಡುಮಂಡು ಎಂಬಲ್ಲಿ ಶನಿವಾರ ತೋಡಾ ಬುಡಕಟ್ಟು ಸಮುದಾಯದವರೊಂದಿಗೆ ಸಮಯ ಕಳೆದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ‘ಇಳವಟ್ಟಕಲ್‌’ ಸ್ಪರ್ಧೆಯನ್ನು ಕೂತೂಹಲದಿಂದ ವೀಕ್ಷಿಸಿದರು
ತಮಿಳುನಾಡಿನ ನೀಲಗಿರಿ ಜಿಲ್ಲೆಯ ಮುತ್ತುನಾಡುಮಂಡು ಎಂಬಲ್ಲಿ ಶನಿವಾರ ತೋಡಾ ಬುಡಕಟ್ಟು ಸಮುದಾಯದವರೊಂದಿಗೆ ಸಮಯ ಕಳೆದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ‘ಇಳವಟ್ಟಕಲ್‌’ ಸ್ಪರ್ಧೆಯನ್ನು ಕೂತೂಹಲದಿಂದ ವೀಕ್ಷಿಸಿದರು    –ಪಿಟಿಐ ಚಿತ್ರ 

ವಯನಾಡ್ (ಪಿಟಿಐ): ಲೋಕಸಭಾ ಸದಸ್ಯತ್ವ ಮರುಸ್ಥಾಪನೆಗೊಂಡ ಬಳಿಕ ಇದೇ ಮೊದಲ ಬಾರಿಗೆ ಕೇರಳದ ವಯನಾಡ್ ಲೋಕಸಭಾ ಕ್ಷೇತ್ರಕ್ಕೆ ಶನಿವಾರ ಭೇಟಿ ನೀಡಿದ ರಾಹುಲ್‌ ಗಾಂಧಿ ಅವರಿಗೆ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಕಾರ್ಯಕರ್ತರು ಅದ್ದೂರಿ ಸ್ವಾಗತ ಕೋರಿದರು.

ಸಂಜೆ 5.30ಕ್ಕೆ ವಯನಾಡ್‌ ತಲುಪಿದ ರಾಹುಲ್‌ ಅವರನ್ನು ಜಯಘೋಷಗಳೊಂದಿಗೆ ಯುಡಿಎಫ್‌ ನಾಯಕರು ಸಂಭ್ರಮದಿಂದ ಬರಮಾಡಿಕೊಂಡರು. 

ಕಲ್‌ಪೆಟ್ಟದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್‌ ಗಾಂಧಿ, ಮಣಿಪುರದ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡರು.  

ADVERTISEMENT

‘ಅವರು (ಮೋದಿ) 2 ಗಂಟೆ 13 ನಿಮಿಷಗಳ ಕಾಲ ಸಂಸತ್‌ನಲ್ಲಿ ಮಾತನಾಡಿದರು. ನಕ್ಕರು, ನಗೆ ಚಟಾಕಿ ಹಾರಿಸಿದರು, ಅವರ ಮಂತ್ರಿಗಳು ನಕ್ಕರು, ಹಾಸ್ಯ ಮಾಡಿದರು, ಎಲ್ಲರೂ ಬಹಳ ಸಂತೋಷದಿಂದಿದ್ದರು. ಎಲ್ಲದರ ಬಗ್ಗೆ ಎರಡು ಗಂಟೆ ಮಾತನಾಡಿದರು. ಕಾಂಗ್ರೆಸ್‌ ಬಗ್ಗೆ, ‘ಇಂಡಿಯಾ’ ಮೈತ್ರಿ ಕೂಟದ ಬಗ್ಗೆ ಚರ್ಚೆ ಮಾಡಿದರು. ಆದರೆ, ಮಣಿಪುರದ ವಿಚಾರಗಳ ಬಗ್ಗೆ ಅವರು ಮಾತನಾಡಿದ್ದು ಕೇವಲ ಎರಡು ನಿಮಿಷ ಮಾತ್ರ’ ಎಂದು ವಾಗ್ದಾಳಿ ನಡೆಸಿದರು. 

ತೋಡಾ ಸಮುದಾಯದೊಂದಿಗೆ ಒಡನಾಟ

ನೀಲಗಿರಿ (ಪಿಟಿಐ): ಕೇರಳದ ವಯನಾಡು ಲೋಕಸಭಾ ಕ್ಷೇತ್ರಕ್ಕೆ ತೆರತ್ತಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಮಾರ್ಗ ಮಧ್ಯೆ ತಮಿಳುನಾಡಿನ ನೀಲಗಿರಿಯಲ್ಲಿ ತೋಡಾ ಸಮುದಾಯದವರೊಂದಿಗೆ ಸಮಯ ಕಳೆದರು.

ಮುತ್ತುನಾಡುಮಂಡು ಎಂಬಲ್ಲಿ ಬುಡಕಟ್ಟು ಜನರ ಜತೆ ಸಂವಾದ ನಡೆಸಿದ ಅವರು, ಸಾಂಪ್ರದಾಯಿಕ ನೃತ್ಯದಲ್ಲಿ ಹೆಜ್ಜೆ ಹಾಕಿದರು. ನಂತರ ಅವರ ಆರಾಧ್ಯ ದೈವದ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. 

ಮುಂದಿನ ಬಾರಿ ಪ್ರಧಾನಿಯಾಗಿ ಇಲ್ಲಿಗೆ ಬರುವಂತೆ ತೋಡಾ ಸಮುದಾಯದ ಮಹಿಳೆಯರು ರಾಹುಲ್‌ರನ್ನು ಆಶೀರ್ವದಿಸಿದರು. 

ರಾಹುಲ್‌ಗೆ ಸಾಂಪ್ರದಾಯಿಕ ಶಾಲನ್ನು ಉಡುಗೊರೆಯಾಗಿ ನೀಡಲಾಯಿತು. ತೋಡಾ ಸಮುದಾಯದ ಜನ ನೀಡಿದ ಆಹಾರವನ್ನು ರಾಹುಲ್‌ ಸವಿದರು. ಸಾಂಪ್ರದಾಯಿಕ ಕ್ರೀಡೆಯಾದ 'ಇಳವಟ್ಟಕ್ಕಲ್'ಗೆ ಅವರು ಸಾಕ್ಷಿಯಾದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.