ADVERTISEMENT

ಕೋವಿಡ್‌ ಸಂತ್ರಸ್ತರ ಕುಟುಂಬಗಳಿಗೆ ಪರಿಹಾರ ನೀಡಲು ರಾಹುಲ್‌ ಆಗ್ರಹ

ಪಿಟಿಐ
Published 1 ಅಕ್ಟೋಬರ್ 2022, 11:25 IST
Last Updated 1 ಅಕ್ಟೋಬರ್ 2022, 11:25 IST
ಭಾರತ್‌ ಜೋಡೊ ಯಾತ್ರಾ ಅಂಗವಾಗಿ ಗುಂಡ್ಲುಪೇಟೆಗೆ ಆಗಮಿಸಿದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ 
ಭಾರತ್‌ ಜೋಡೊ ಯಾತ್ರಾ ಅಂಗವಾಗಿ ಗುಂಡ್ಲುಪೇಟೆಗೆ ಆಗಮಿಸಿದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ    

ನವದೆಹಲಿ: ಕೋವಿಡ್‌–19ನಿಂದ ಮೃತಪಟ್ಟವರ ಕುಟುಂಬಗಳಿಗೆ ಸೂಕ್ತವಾದ ಪರಿಹಾರ ನೀಡಬೇಕು ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಶನಿವಾರ ಆಗ್ರಹಿಸಿದರು.

ಕಾಂಗ್ರೆಸ್‌ನ ‘ಭಾರತ್‌ ಜೋಡೊ ಯಾತ್ರಾ’ ಕರ್ನಾಟಕದ ಗುಂಡ್ಲುಪೇಟೆ ಪ್ರವೇಶಿಸಿದ ವೇಳೆ ಅವರು ಕೋವಿಡ್‌ ಸಾಂಕ್ರಾಮಿಕದ ವೇಳೆ ಆಮ್ಲಜನಕ ಕೊರತೆಯಿಂದಾಗಿ ಮೃತಪಟ್ಟರ ಕುಟುಂಬಗಳ ಜೊತೆ ಚರ್ಚೆ ನಡೆಸಿದರು. ಅವರು ನಡೆಸಿದ ಸಂಭಾಷಣೆಯ ವಿಡಿಯೊವೊಂದನ್ನು ಟ್ವೀಟ್‌ ಮಾಡಿದ್ದಾರೆ.ಪ್ರತೀಕ್ಷಾ ಎಂಬ ಬಾಲಕಿ ತನ್ನ ಕುಟುಂಬ ನಿರ್ವಹಣೆಗೆ ಮತ್ತು ತನ್ನ ಶಿಕ್ಷಣಕ್ಕೆ ಸಹಾಯ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡುವುದು ಈ ವಿಡಿಯೊದಲ್ಲಿ ಸೆರೆಯಾಗಿದೆ. ‘ಪ್ರಧಾನಿ ಅವರೇ ಬಿಜೆಪಿಯ ಕೋವಿಡ್‌ನ ಅಸಮರ್ಪಕ ನಿರ್ವಹಣೆಯಿಂದ ತಂದೆಯನ್ನು ಕಳೆದುಕೊಂಡ ಪ್ರತೀಕ್ಷಾಳ ಮಾತುಗಳನ್ನು ಕೇಳಿಸಿಕೊಳ್ಳಿ’ ಎಂದು ವಿಡಿಯೊಗೆ ರಾಹುಲ್‌ ಅಡಿಬರಹ ಬರೆದಿದ್ದಾರೆ. ಅಲ್ಲದೇ, ಕೋವಿಡ್‌–19 ಸಂತ್ರಸ್ತರ ಕುಟುಂಬಗಳು ಸೂಕ್ತ ಪರಿಹಾರವನ್ನು ಪಡೆಯಬಾರದೇ? ಅವರಿಗೆ ಪರಿಹಾರವನ್ನು ಏಕೆ ನಿರಾಕರಿಸುತ್ತಿದ್ದೀರ? ಎಂದೂ ಅವರು ಪ್ರಶ್ನಿಸಿದ್ದಾರೆ.

ಈ ಘಟನೆ ಕುರಿತು ಕಾಂಗ್ರೆಸ್ ಹೇಳಿಕೆ ಪ್ರಕಟಿಸಿದೆ. ಕೋವಿಡ್‌ನಿಂದ ಮೃತಪಟ್ಟ ಹಲವರ ಕುಟುಂಬಗಳ ಜೊತೆ ರಾಹುಲ್‌ ಚರ್ಚೆ ನಡೆಸಿದರು. ಬಿಜೆಪಿ ಸರ್ಕಾರವು ಕೋವಿಡ್‌ ಸಾವುಗಳನ್ನು ಪರಿಗಣನೆಗೇ ತೆಗೆದುಕೊಂಡಿಲ್ಲ ಎಂದು ಸರ್ಕಾರದ ವಿರುದ್ಧ ಹಲವರು ಆಕ್ರೋಶ ವ್ಯಕ್ತಪಡಿಸಿದರು ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.