ನವದೆಹಲಿ: ‘ಬಾಂಗ್ಲಾದೇಶದಲ್ಲಿರುವ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದಾಳಿ ಮತ್ತು ದೇಶದೆಲ್ಲೆಡೆ ಇರುವ ಉಗ್ರ ಸ್ವರೂಪಿ ಕೃತ್ಯಗಳಿಗೆ ಸಂಬಂಧಿಸಿ ಅಲ್ಲಿನ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್ ಯೂನುಸ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಚರ್ಚೆ ನಡೆಸಿದರು’ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಬುಧವಾರ ತಿಳಿಸಿದರು.
ಥಾಯ್ಲೆಂಡ್ನಲ್ಲಿ ಇತ್ತೀಚೆಗೆ ನಡೆದ ಬಿಐಎಂಎಸ್ಟಿಇಸಿ ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಹಾಗೂ ಮೊಹಮ್ಮದ್ ಯೂನುಸ್ ಅವರು ಭೇಟಿಯಾಗಿ, ಮಾತುಕತೆ ನಡೆಸಿದ್ದರು. ಈ ವೇಳೆ ಇಬ್ಬರ ನಡುವಿನ ಮಾತುಕತೆಗಳ ಬಗ್ಗೆ ಸುದ್ದಿ ವಾಹಿನಿಯೊಂದರ ಶೃಂಗಸಭೆಯಲ್ಲಿ ಜೈಶಂಕರ್ ಮಾಹಿತಿ ನೀಡಿದರು.
‘ಭಾರತದ ಸಂದೇಶ ಇದ್ದಿದ್ದು ಇಷ್ಟೆ. ನಮ್ಮ ಎರಡು ದೇಶಗಳ ಸಂಬಂಧಕ್ಕೆ ಐತಿಹಾಸಿಕ ಕಾರಣಗಳಿವೆ. ಬಾಂಗ್ಲಾದೇಶಕ್ಕೆ ಒಳ್ಳೆಯದಾಗಲಿ ಎಂದು ನಮ್ಮ ದೇಶ ಹಾರೈಸುವಷ್ಟು ಬೇರೆ ಯಾರೂ ಹಾರೈಸಲಾರರು. ಇದು ನಮ್ಮ ಡಿಎನ್ಎನಲ್ಲಿ ಇದೆ’ ಎಂದರು.
‘ಉಗ್ರತ್ವ ಮನೋಭಾವವು ಬಾಂಗ್ಲಾದೇಶದಲ್ಲಿ ಬೆಳೆದಿದೆ. ಅಲ್ಪಸಂಖ್ಯಾತರ ಮೇಲೆ ದಾಳಿಗಳಾಗುತ್ತಿವೆ. ಇವು ನಮ್ಮ ಕಳವಳ. ನಮ್ಮದು ಪ್ರಜಾತಾಂತ್ರಿಕ ದೇಶ. ಪ್ರಜಾಪ್ರಭುತ್ವಕ್ಕೆ ಚುನಾವಣೆಗಳು ಅಗತ್ಯ. ಯಾರು ಅಧಿಕಾರಕ್ಕೆ ಬರಬೇಕು, ಕೆಳಗಿಳಿಯಬೇಕು ಎಂದು ಚುನಾವಣೆಗಳು ನಿರ್ಧರಿಸುತ್ತವೆ’ ಎಂದರು. ಚುನಾವಣೆ ನಡೆಸುವಂತೆ ಭಾರತವು ಬಾಂಗ್ಲಾದೇಶಕ್ಕೆ ಒತ್ತಡ ತಂದಿದೆ ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.