ಜೈಪುರ: ರಾಹುಲ್ ಗಾಂಧಿ ಅವರನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವಂತೆ ರಾಜಸ್ಥಾನ ಪ್ರದೇಶ ಕಾಂಗ್ರೆಸ್ ಅವಿರೋಧದ ನಿರ್ಣಯವನ್ನು ಅಂಗೀಕರಿಸಿದೆ ಎಂದು ಅಲ್ಲಿನ ಆಹಾರ ಸಚಿವ ಪ್ರತಾಪ್ ಸಿಂಗ್ ಕಚರಿಯಾ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ನಡೆಯಲಿರುವ ಚುನಾವಣೆಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆಗೆ ದಿನಗಣನೆ ಆರಂಭಗೊಂಡ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ರಾಜಸ್ಥಾನಮುಖ್ಯಮಂತ್ರಿ ಅಶೋಕ್ ಗೆಹಲೋತ್ ಅವರು ರಾಹುಲ್ ಗಾಂಧಿ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡುವ ನಿರ್ಣಯವನ್ನು ಶಾಸಕಾಂಗ ಪಕ್ಷದ ಮುಂದಿಟ್ಟಿದ್ದರು. ಎಲ್ಲರೂ ಕೈ ಎತ್ತುವ ಮೂಲಕ ನಿರ್ಣಯಕ್ಕೆ ಅಂಗೀಕಾರ ಸಿಕ್ಕಿದೆ ಎಂದು ಪ್ರತಾಪ್ ಸಿಂಗ್ ತಿಳಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ಅಧ್ಯಕ್ಷರನ್ನು ಮತ್ತು ಎಐಸಿಸಿ ಸದಸ್ಯರನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ಪಕ್ಷದ ಹೈಕಮಾಂಡ್ಗೆ ಬಿಡುವ ನಿರ್ಣಯವನ್ನು ಇದೇ ವೇಳೆ ತೆಗೆದುಕೊಳ್ಳಲಾಗಿದೆ ಎಂದರು.
ಶನಿವಾರ ರಾಜ್ಯ ಕಾಂಗ್ರೆಸ್ನ ಮುಖ್ಯ ಕಚೇರಿಯಲ್ಲಿ ನಿರ್ಣಯ ಅಂಗೀಕಾರ ಸಭೆ ನಡೆಯಿತು.
ಸೆಪ್ಟೆಂಬರ್ 24 ರಿಂದ 30ರ ಒಳಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಬಹುದಾಗಿದೆ. ಅಕ್ಟೋಬರ್ 17ಕ್ಕೆ ಚುನಾವಣೆ ನಡೆಯಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.