'ಪ್ಲಾಟಿನಂ ಜುಬಿಲಿ' ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಜಸ್ಥಾನ ಮುಖ್ಯಮಂತ್ರಿ ಭಜನ್ಲಾಲ್ ಶರ್ಮಾ
ಪಿಟಿಐ ಚಿತ್ರ
ಜೈಪುರ: ದೇಶದಾದ್ಯಂತ ತುರ್ತು ಪರಿಸ್ಥಿತಿ ಹೇರಿಕೆಯಾಗಿದ್ದ ಸಂದರ್ಭದಲ್ಲೂ ನ್ಯಾಯದ ತತ್ವಗಳನ್ನು ರಕ್ಷಿಸಿದ್ದ ನ್ಯಾಯಾಲಯಗಳಲ್ಲಿ ರಾಜಸ್ಥಾನ ಹೈಕೋರ್ಟ್ ಸಹ ಒಂದು ಎಂದು ಮುಖ್ಯಮಂತ್ರಿ ಭಜನ್ಲಾಲ್ ಶರ್ಮಾ ಭಾನುವಾರ ಹೇಳಿದ್ದಾರೆ.
ರಾಜಸ್ಥಾನ ಹೈಕೋರ್ಟ್ನ 'ಪ್ಲಾಟಿನಂ ಜುಬಿಲಿ' ಸಮಾರಂಭ ಜೋಧ್ಪುರದಲ್ಲಿ ಭಾನುವಾರ ನಡೆಯಿತು. ಈ ವೇಳೆ ಮಾತನಾಡಿದ ಶರ್ಮಾ, 'ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ನಾಗರಿಕರ ಹಕ್ಕುಗಳಿಗೆ ಧಕ್ಕೆಯಾಗಿತ್ತು. ಆಗ, ಯಾರು ಬೇಕಾದರೂ ತಮ್ಮ ಬಂಧನವನ್ನು ಪ್ರಶ್ನಿಸಬಹುದು ಎಂಬ ಖಾತ್ರಿಯನ್ನು ನ್ಯಾಯಾಲಯ ನೀಡಿತ್ತು' ಎಂದು ಹೇಳಿದ್ದಾರೆ.
'ನ್ಯಾಯಾಲಯವು ಸದಾ ಕಾನೂನಿನ ನಿಯಮಗಳನ್ನು ಪಾಲಿಸುತ್ತಿದೆ, ಗೌರವಿಸುತ್ತಿದೆ ಮತ್ತು ಅದರ ರಕ್ಷಣೆಗೆ ನಿಂತಿದೆ ಎಂಬುದಕ್ಕೆ ಅದೇ ಸಾಕ್ಷಿ' ಎಂದು ಶ್ಲಾಘಿಸಿದ್ದಾರೆ.
ರಾಜಸ್ಥಾನದಲ್ಲಿ ಮೂರೂ ಅಂಗಗಳು (ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ) ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿವೆ. ಹಾಗಾಗಿಯೇ ಹಲವು ಪ್ರಕರಣಗಳು ಪರಸ್ಪರ ಸಹಕಾರದಿಂದ ಇತ್ಯರ್ಥಗೊಂಡಿವೆ. ಇದರಿಂದಾಗಿ, ದೀರ್ಘ ಕಾಲ ಜನರು ಕಾನೂನು ಸಂಘರ್ಷ ನಡೆಸುವುದು ತಪ್ಪಿದೆ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಹಲವು ಹಳೇ ಕಾನೂನುಗಳನ್ನು ರದ್ದುಪಡಿಸಿ, ಹೊಸ ಕಾನೂನುಗಳನ್ನು ರೂಪಿಸಿದ್ದಾರೆ. ಇದರಿಂದ ನ್ಯಾಯಾಂಗದ ಪ್ರಕ್ರಿಯೆ ಸರಳವಾಗಿದೆ ಎಂದಿರುವ ಮುಖ್ಯಮಂತ್ರಿ, 'ಮಿಷನ್ ಕರ್ಮಯೋಗಿ'ಯು ಕಾನೂನು ಸಂಬಂಧಿ ವಿಷಯಗಳಲ್ಲಿ ಪರಿಣತಿ ಹೊಂದಲು ಅಧಿಕಾರಿಗಳಿಗೆ ಅವಕಾಶ ಕಲ್ಪಿಸುತ್ತದೆ ಎಂದಿದ್ದಾರೆ.
ರಾಜಸ್ಥಾನದ ಸುಮಾರು 5.3 ಲಕ್ಷ ಸಿಬ್ಬಂದಿ 'ಮಿಷನ್ ಕರ್ಮಯೋಗಿ' ಅಡಿಯಲ್ಲಿ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಈ ಪೈಕಿ 2.35 ಲಕ್ಷಕ್ಕೂ ಹೆಚ್ಚು ಮಂದಿ ಕೋರ್ಸ್ಗಳನ್ನು ಪೂರೈಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.