ADVERTISEMENT

ರಾಜಸ್ಥಾನ: ಆಸ್ಪತ್ರೆಯಲ್ಲಿ ಬೆಂಕಿ, 8 ರೋಗಿಗಳು ಸಾವು 

ಪಿಟಿಐ
Published 6 ಅಕ್ಟೋಬರ್ 2025, 15:47 IST
Last Updated 6 ಅಕ್ಟೋಬರ್ 2025, 15:47 IST
<div class="paragraphs"><p>ಬೆಂಕಿ ಅವಘಡದಿಂದಾಗಿ ರೋಗಿಗಳ ಸಮೇತ ಆಸ್ಪತ್ರೆಯಿಂದ ಹೊರಬಂದು ನಿಂತಿದ್ದ ಕುಟುಂಬಸ್ಥರು ಮತ್ತು ಆಸ್ಪತ್ರೆ ಸಿಬ್ಬಂದಿ </p></div>

ಬೆಂಕಿ ಅವಘಡದಿಂದಾಗಿ ರೋಗಿಗಳ ಸಮೇತ ಆಸ್ಪತ್ರೆಯಿಂದ ಹೊರಬಂದು ನಿಂತಿದ್ದ ಕುಟುಂಬಸ್ಥರು ಮತ್ತು ಆಸ್ಪತ್ರೆ ಸಿಬ್ಬಂದಿ

   

ಪಿಟಿಐ ಚಿತ್ರ

ಜೈಪುರ: ಇಲ್ಲಿನ ಸವಾಯಿ ಮಾನ್‌ ಸಿಂಗ್‌  (ಎಸ್‌ಎಂಎಸ್) ಆಸ್ಪತ್ರೆಯ ಟ್ರಾಮಾ ಸೆಂಟರ್‌ನಲ್ಲಿ ಭಾನುವಾರ ತಡರಾತ್ರಿ ಬೆಂಕಿ ಅವಘಡ ಸಂಭವಿಸಿದೆ. ಘಟನೆಯಲ್ಲಿ ಎಂಟು ರೋಗಿಗಳು ಮೃತಪಟ್ಟಿದ್ದಾರೆ. 

ADVERTISEMENT

ಟ್ರಾಮಾ ಸೆಂಟರ್‌ ಉಸ್ತುವಾರಿ ಡಾ.ಅನುರಾಗ್‌ ಧಾಕಡ್‌ ಈ ಬಗ್ಗೆ ಮಾಹಿತಿ ನೀಡಿದ್ದು, ‘ತೀವ್ರ ನಿಗಾ ಘಟಕದಲ್ಲಿ ಒಟ್ಟು 11 ಮಂದಿ ರೋಗಿಗಳನ್ನು ದಾಖಲಿಸಲಾಗಿತ್ತು. ಐಸಿಯು ವಾರ್ಡ್‌ನ ಸ್ಟೋರ್‌ ರೂಂನಲ್ಲಿ ಬೆಂಕಿ ಕಾಣಿಸಿಕೊಂಡು, ಇಡೀ ವಾರ್ಡ್‌ ವ್ಯಾಪಿಸಿದ್ದರಿಂದ ಎಂಟು ರೋಗಿಗಳು ಮೃತಪಟ್ಟಿದ್ದಾರೆ. ಈ ಪೈಕಿ ಮೂವರು ಮಹಿಳೆಯರು’ ಎಂದು ಹೇಳಿದ್ದಾರೆ.

ಶಾರ್ಟ್‌ ಸರ್ಕ್ಯೂಟ್‌ನಿಂದ ಈ ಅವಘಡ ಸಂಭವಿಸಿರುವ ಸಾಧ್ಯತೆ ಇದೆ ಎಂದೂ ಡಾ. ಅನುರಾಗ್‌ ತಿಳಿಸಿದ್ದಾರೆ. ಜತೆಗೆ ಬೆಂಕಿ ಅವಘಡದಿಂದ ರೋಗಿಗಳು– ಅವರ ಕುಟುಂಬಸ್ಥರು ಹಾಗೂ ಆಸ್ಪತ್ರೆ ಸಿಬ್ಬಂದಿ ಕೂಡ ಭಯಭೀತರಾಗಿದ್ದರು. ಆದರೂ, ಇತರೆ ಐಸಿಯು ವಾರ್ಡ್‌ಗಳಲ್ಲಿದ್ದ 13 ರೋಗಿಗಳನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗಿದೆ ಎಂದೂ ತಿಳಿಸಿದ್ದಾರೆ. 

ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆಯೇ ರೋಗಿಗಳ ಕುಟುಂಬಸ್ಥರು ಹಾಗೂ ಸಿಬ್ಬಂದಿ ಸೇರಿ ಕೆಲವು ರೋಗಿಗಳನ್ನು ಸ್ಟ್ರೆಚರ್‌ಗಳ ಮೂಲಕ ಆಸ್ಪತ್ರೆಯಿಂದ ಹೊರಗೆ ಕರೆತಂದಿದ್ದಾರೆ. ಬೆಂಕಿಯ ತೀವ್ರತೆ ಹೆಚ್ಚಾದ ಪರಿಣಾಮ ಉಳಿದವರನ್ನು ರಕ್ಷಿಸಲು ಸಾಧ್ಯವಾಗಿಲ್ಲ. ಅಗ್ನಿಶಾಮಕ ದಳದ ಸಿಬ್ಬಂದಿ ಸತತ 2 ಗಂಟೆ ಕಾರ್ಯಾಚರಣೆ ನಡೆಸಿ, ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದೂ ಅಧಿಕಾರಿಗಳು ಹೇಳಿದ್ದಾರೆ. 

ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಲು ರಾಜ್ಯ ಸರ್ಕಾರವು ಉನ್ನತ ಮಟ್ಟದ ಸಮಿತಿ ರಚಿಸಿರುವುದಾಗಿ ಹೇಳಿದೆ. ಮುಖ್ಯಮಂತ್ರಿ ಭಜನ್‌ ಲಾಲ್‌ ಶರ್ಮಾ ಸೇರಿದಂತೆ ಸಂಪುಟದ ಇತರೆ ಸಚಿವರು ಕೂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಆಸ್ಪತ್ರೆಯ ಪರಿಸ್ಥಿತಿ ಪರಿಶೀಲಿಸಿ, ರೋಗಿಗಳ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಪ್ರಧಾನಿ ಮೋದಿ ಕೂಡ ಘಟನೆ ಕುರಿತು ಸಂತಾಪ ಸೂಚಿಸಿದ್ದಾರೆ. 

ನಿರ್ಲಕ್ಷ್ಯ ಕಾರಣ: ಆರೋಪ 

ಬೆಂಕಿ ಅವಘಡಕ್ಕೆ ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ ಎಂದು ಕೆಲವು ರೋಗಿಗಳ ಕುಟುಂಬಸ್ಥರು ಆರೋಪಿಸಿದ್ದಾರೆ. ಹೊಗೆ ಕಾಣಿಸಿಕೊಳ್ಳುತ್ತಿದ್ದಂತೆಯೇ ನಾವು ಸಿಬ್ಬಂದಿಗೆ ಮಾಹಿತಿ ನೀಡಿದೆವು. ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ನಂತರ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆಯೇ ಆಸ್ಪತ್ರೆಯಿಂದ ಮೊದಲಿಗೆ ದೌಡಾಯಿಸಿದ್ದೇ ಸಿಬ್ಬಂದಿ. ಈಗ ರೋಗಿಗಳು ಹೇಗಿದ್ದಾರೆ ಎಂಬುದರ ಬಗ್ಗೆಯೂ ನಮಗೆ ಯಾರೂ ಮಾಹಿತಿ ನೀಡುತ್ತಿಲ್ಲ ಎಂದೂ ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.