ADVERTISEMENT

ಕರ್ನಾಟಕದಲ್ಲಿ ಹೂಡಿಕೆ: ಕೇರಳದ ಸಂಸ್ಥೆಗೆ ರಾಜೀವ್‌ ಚಂದ್ರಶೇಖರ್ ಆಹ್ವಾನ

​ಪ್ರಜಾವಾಣಿ ವಾರ್ತೆ
Published 10 ಜುಲೈ 2021, 16:34 IST
Last Updated 10 ಜುಲೈ 2021, 16:34 IST
ರಾಜೀವ್ ಚಂದ್ರಶೇಖರ್‌
ರಾಜೀವ್ ಚಂದ್ರಶೇಖರ್‌   

ತಿರುವನಂತಪುರ: ಕರ್ನಾಟಕದಲ್ಲಿ ಬಂಡವಾಳ ಹೂಡಬೇಕು ಎಂದು ಕೇರಳ ಮೂಲದ ಸಿದ್ಧ ಉಡುಪುಗಳ ಉತ್ಪಾದನಾ ಸಂಸ್ಥೆ ಕಿಟೆಕ್ಸ್‌ ಗಾರ್ಮೆಂಟ್ಸ್‌ಗೆ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಆಹ್ವಾನಿಸಿದ್ದಾರೆ.

ಕೇರಳ ಸರ್ಕಾರದದಿಂದ ಕಿರುಕುಳ ಆರೋಪದ ಹಿನ್ನೆಲೆಯಲ್ಲಿ ₹ 3,500 ಕೋಟಿ ಹೂಡಿಕೆ ಮಾಡುವ ಪ್ರಸ್ತಾಪ ಹಿಂಪಡೆಯಲು ಸಂಸ್ಥೆ ಚಿಂತನೆ ನಡೆಸಿದೆ ಎಂಬ ಬೆಳವಣಿಗೆಯ ಹಿಂದೆಯೇ ಈ ಆಹ್ವಾನ ನೀಡಲಾಗಿದೆ.

ತೆಲಂಗಾಣ ಸರ್ಕಾರದ ಆಹ್ವಾನದ ಬಳಿಕ ಈಚೆಗೆ ಸಂಸ್ಥೆಯು ಆ ರಾಜ್ಯದಲ್ಲಿ ₹ 1,000 ಕೋಟಿ ಬಂಡವಾಳವನ್ನು ಹೂಡಿಕೆ ಮಾಡುವ ತೀರ್ಮಾನವನ್ನು ಪ್ರಕಟಿಸಿತ್ತು.

ADVERTISEMENT

ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ರಾಜೀವ್ ಚಂದ್ರಶೇಖರ್‌, ಈಚೆಗೆ ಕೇಂದ್ರ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದರು. ಈ ಕುರಿತು ಟ್ವೀಟ್‌ ಮಾಡಿರುವ ಸಚಿವರು, ನಾನು ಕಿಟೆಕ್ಸ್ ಗಾರ್ಮೆಂಟ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಸಬು ಜಾಕೋಬ್‌ ಜೊತೆ ಚರ್ಚಿಸಿದ್ದು, ಕರ್ನಾಟಕದಲ್ಲಿ ಹೂಡಿಕೆಗೆ ಆಹ್ವಾನಿಸಿದ್ದೇನೆ ಎಂದು ತಿಳಿಸಿದ್ದಾರೆ.

ಈ ಟ್ವೀಟ್ ಅನ್ನು ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಖಾತೆಗೂ ಟ್ಯಾಗ್‌ ಮಾಡಿದ್ದಾರೆ.

ಈ ಮಧ್ಯೆ, ಕೇರಳ ಬಂಡವಾಳ ಹೂಡಿಕೆ ಸ್ನೇಹಿ ರಾಜ್ಯವಲ್ಲ ಎಂಬ ಕಿಟೆಕ್ಸ್‌ ಸಮೂಹದ ವ್ಯವಸ್ಥಾಪಕ ನಿರ್ದೇಶಕರ ಹೇಳಿಕೆಯನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅಲ್ಲಗಳೆದಿದ್ದಾರೆ. ಗೊಂದಲ ಬಗೆಹರಿಸುವ ಕ್ರಮವಾಗಿ ಏಕಗವಾಕ್ಷಿ ವ್ಯವಸ್ಥೆ ಸೇರಿ ಉದ್ಯಮಗಳ ಸ್ಥಾಪನೆಗೆ ಪೂರಕವಾದ ವಿವಿಧ ಕ್ರಮಗಳನ್ನು ಪಟ್ಟಿಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.