ADVERTISEMENT

ಹತ್ಯೆ ಪ್ರಕರಣ: ಶರಣಾದ ಶರಣ ಭವನದ ಮಾಲೀಕ ರಾಜಗೋಪಾಲ್‌

​ಪ್ರಜಾವಾಣಿ ವಾರ್ತೆ
Published 9 ಜುಲೈ 2019, 14:04 IST
Last Updated 9 ಜುಲೈ 2019, 14:04 IST
   

ಚೆನ್ನೈ: ಶರವಣ ಭವನ ಹೋಟೆಲ್ ಸಮೂಹದ ಮಾಲೀಕ ಪಿ.ರಾಜಗೋಪಾಲ್‌ ಅವರಿಗೆ ಶರಣಾಗಲು ಹೆಚ್ಚಿನ ಕಾಲಾವಕಾಶ ನೀಡಲು ಸುಪ್ರೀಂಕೋರ್ಟ್‌ ಮಂಗಳವಾರ ನಿರಾಕರಿಸಿದ್ದರಿಂದ ಅವರು ನ್ಯಾಯಾಲಯದಲ್ಲಿ ಶರಣಾದರು.

ಆಮ್ಲಜನಕದ ಮಾಸ್ಕ್‌ ಧರಿಸಿದ್ದ ಅವರುಮದ್ರಾಸ್‌ ಹೈಕೋರ್ಟ್‌ನಲ್ಲಿ ಪೊಲೀಸರಿಗೆ ಶರಣಾದರು ಎಂದು ಮಾಧ್ಯಮಗಳು ವರದಿ ಮಾಡಿವೆ.

ಆರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ಸದ್ಯಕ್ಕೆ ಪೊಲೀಸರಿಗೆ ಶರಣಾಗಲು ಸಾಧ್ಯವಿಲ್ಲ, ಇನ್ನು ಹೆಚ್ಚಿನ ಕಾಲಾವಕಾಶ ನೀಡಬೇಕು ಎಂದುಪಿ.ರಾಜಗೋಪಾಲ್‌ ಮನವಿ ಮಾಡಿದ್ದರು.

ADVERTISEMENT

ಪಿ.ರಾಜಗೋಪಾಲ್‌ ಅವರ ಅರ್ಜಿವಿಚಾರಣೆ ನಡೆಸಿದ ನ್ಯಾಯಧೀಶ ಎನ್.ವಿ.ರಾಮಣ್ಣ ಹೆಚ್ಚಿನ ಕಾಲಾವಕಾಶ ನೀಡಲು ನಿರಾಕರಿಸಿದರು. ಈ ಕೂಡಲೇ ಶರಣಾಗುವಂತೆ ಅರ್ಜಿದಾರರ ಪರ ವಕೀಲರಿಗೆ ಸೂಚನೆ ನೀಡಿದರು.

ಸುಪ್ರೀಂಕೋರ್ಟ್‌ ತೀರ್ಪಿನಂತೆಪಿ.ರಾಜಗೋಪಾಲ್‌ ಕಳೆದ ಭಾನುವಾರದಂದೇ ಪೊಲೀಸರಿಗೆ ಶರಣಾಗಬೇಕಿತ್ತು. ಅನಾರೋಗ್ಯದ ಕಾರಣ ಹೇಳಿ ಅವರು ಪೊಲೀಸರಿಗೆ ಶರಣಾಗಿರಲಿಲ್ಲ.

ಕಳೆದ ಕೆಲವು ದಿನಗಳಿಂದ ಇಲ್ಲಿನ ಅಶೋಕನಗರದ ಮನೆಯಲ್ಲಿ ವಾಸವಿದ್ದ ರಾಜಗೋಪಾಲ್‌ ಗುರುವಾರ ಆಸ್ಪತ್ರೆಗೆ ದಾಖಲಾಗಿದ್ದರು. ಅನಾರೋಗ್ಯದ ಕಾರಣ ಹೇಳಿಯೇ ಅವರು ತಮ್ಮ ಶರಣಾಗತಿಯನ್ನು ಅವಧಿಯನ್ನು ವಿಸ್ತರಿಸಲು ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಈ ಮನವಿಯನ್ನು ನ್ಯಾಯಾಲಯ ಪುರಸ್ಕರಿಸಲಿಲ್ಲ.

ತನ್ನ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ನೌಕರನ ಹೆಂಡತಿಯನ್ನು ಮದುವೆಯಾಗುವ ದುರುದ್ದೇಶದಿಂದ 2001ರ ಅಕ್ಟೋಬರ್‌ನಲ್ಲಿ ನೌಕರನನ್ನು ಅಪಹರಿಸಿ ಕೊಲೆ ಮಾಡಿದ್ದ ಶರವಣ ಭವನ ಹೋಟೆಲ್ ಸಮೂಹದ ಮಾಲೀಕ ಪಿ.ರಾಜಗೋಪಾಲ್‌ಗೆ ಮದ್ರಾಸ್ ಹೈಕೋರ್ಟ್‌ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಸುಪ್ರೀಂಕೋರ್ಟ್‌ ಎತ್ತಿಹಿಡಿದು, ಜುಲೈ 7ರ ಒಳಗೆ ಶರಣಾಗಬೇಕು ಎಂದು ಸೂಚಿಸಿತ್ತು.

ಪ್ರಕರಣದ ವಿಚಾರಣೆ ನಡೆಸಿದ್ದ ಮದ್ರಾಸ್ ಹೈಕೋರ್ಟ್‌ ‘ಇದು ಸ್ಪಷ್ಟ ಉದ್ದೇಶಗಳೊಂದಿಗೆ ಮಾಡಿದ ಘೋರ ಕೃತ್ಯ’ ಎಂದು ಅಭಿಪ್ರಾಯಪಟ್ಟು 2009ರಲ್ಲಿ ರಾಜಗೋಪಾಲ್‌ಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದಕ್ಕೂ ಮೊದಲು, 2004ರಲ್ಲಿ ವಿಶೇಷ ನ್ಯಾಯಾಲಯವು ರಾಜಗೋಪಾಲ್ ಮತ್ತು ಇತರ ಐವರು ಸಚರರಿಗೆ ವಿಧಿಸಿದ್ದ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಯ ಅವಧಿಯನ್ನು ಮದ್ರಾಸ್‌ ಹೈಕೋರ್ಟ್‌ ವಿಸ್ತರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.