ರಾಜನಾಥ್ ಸಿಂಗ್
ಪಟ್ನಾ: ಆಡಳಿತಾರೂಢ ಬಿಜೆಪಿಯ ಮತಕಳ್ಳತನ ಕೃತ್ಯಕ್ಕೆ ಚುನಾವಣಾ ಆಯೋಗವು ನೆರವಾಗಿದೆ. ಈ ಆರೋಪವನ್ನು ಸಾಬೀತು ಪಡಿಸಲು ತಮ್ಮ ಬಳಿ ‘ಆಟಂ ಬಾಂಬ್’ ಇದೆ ಎಂದ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶನಿವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ತಮ್ಮ ಬಳಿ ‘ಆಟಂ ಬಾಂಬ್’ ಇದೆ ಎಂದು ಹೇಳುತ್ತಾರೆ. ಒಂದೊಮ್ಮೆ ಅವರ ಬಳಿ ಆಟಂ ಬಾಂಬ್ ಇದ್ದರೆ ಒಮ್ಮೆಲೆ ಅದನ್ನು ಸ್ಫೋಟಿಸಬೇಕು. ಆದರೆ ಅದು ತನಗೇ ಹಾನಿಯಾಗದಂತೆ ಅವರು ಎಚ್ಚರ ವಹಿಸುವುದು ಸೂಕ್ತ ಎಂದಿದ್ದಾರೆ.
ಭಾರತದ ಚುನಾವಣಾ ಆಯೋಗವು ಪ್ರಶ್ನಾತೀತ ಸಮಗ್ರತೆ ಖ್ಯಾತಿ ಹೊಂದಿರುವ ಸಂಸ್ಥೆ. ರಾಜ್ಯದಲ್ಲಿ (ಬಿಹಾರ) ಮುಂಬರುವ ವಿಧಾನಸಭಾ ಚುನಾವಣೆಗಳು ಮುಕ್ತ ಮತ್ತು ನ್ಯಾಯಯುತ ರೀತಿಯಲ್ಲಿ ನಡೆಯುವಂತೆ ನೋಡಿಕೊಳ್ಳಲು ಅದು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಸಾಂವಿಧಾನಿಕ ಸಂಸ್ಥೆಯ ಬಗ್ಗೆ ಕ್ಷುಲ್ಲಕ ಹೇಳಿಕೆಗಳನ್ನು ನೀಡುವುದು ವಿರೋಧ ಪಕ್ಷದ ನಾಯಕನಿಗೆ ಶೋಭೆ ತರದು ಎಂದೂ ಹೇಳಿದ್ದಾರೆ.
ಆಡಳಿತಾರೂಢ ಬಿಜೆಪಿಯ ‘ಮತಕಳ್ಳತನ’ ಕೃತ್ಯಕ್ಕೆ ಚುನಾವಣಾ ಆಯೋಗವು ನೆರವಾಗಿದೆ ಎಂದು ಶುಕ್ರವಾರ ಪುನರುಚ್ಚರಿಸಿದ್ದ ರಾಹುಲ್ ಗಾಂಧಿ, ಈ ಆರೋಪವನ್ನು ಸಾಬೀತು ಪಡಿಸಲು ತಮ್ಮ ಬಳಿ ‘ಆಟಂ ಬಾಂಬ್’ ಇದೆ ಎಂದು ಹೇಳಿದ್ದರು.
ಈ ಕುರಿತು ಕಾಂಗ್ರೆಸ್ ಸಂಗ್ರಹಿಸಿರುವ ದಾಖಲೆ ಮತ್ತು ಪುರಾವೆಗಳನ್ನು ಅವರು ‘ಆಟಂ ಬಾಂಬ್’ಗೆ ಹೋಲಿಕೆ ಮಾಡಿ ಮಾತನಾಡಿದ್ದರು. ನಮ್ಮ ಬಳಿ ಇರುವ ಈ ಆಟಂ ಬಾಂಬ್ ಸ್ಫೋಟಿಸಿದಾಗ ಚುನಾವಣಾ ಆಯೋಗದವರಿಗೆ ತಪ್ಪಿಸಿಕೊಳ್ಳಲು ದೇಶದಲ್ಲಿ ಜಾಗವೇ ಇರುವುದಿಲ್ಲ ಎಂದು ಅವರು ವ್ಯಂಗ್ಯವಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.