ಲಖನೌ: ‘ಪಾಕಿಸ್ತಾನದಲ್ಲಿ ನೆಲೆ ಹೊಂದಿರುವ ಉಗ್ರರ ತಾಣ ಗುರಿಯಾಗಿಸಿ ಭಾರತದ ಸೇನೆ ನಡೆಸಿದ ನಿರ್ದಿಷ್ಟ ದಾಳಿಯು, ತಜ್ಞ ವೈದ್ಯರು ನಡೆಸುವ ‘ಸರ್ಜರಿ’ಯಂತಿತ್ತು. ಇದು, ಈ ಹೊತ್ತಿನ ಅಗತ್ಯವು ಆಗಿತ್ತು’ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಮಂಗಳವಾರ ಇಲ್ಲಿ ವ್ಯಾಖ್ಯಾನಿಸಿದರು.
ಇಲ್ಲಿ ನಡೆದ ಖಾಸಗಿ ಆಸ್ಪತ್ರೆಯೊಂದರ ಬೆಳ್ಳಿ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ‘ಹಲವು ರೀತಿಯಲ್ಲಿ ಯೋಧರು, ವೈದ್ಯರು ಒಂದೇ. ಇಬ್ಬರೂ ಜನರ ರಕ್ಷಣೆಗಾಗಿಯೇ ಇದ್ದಾರೆ’ ಎಂದರು.
‘ಜನರ ರಕ್ಷಣೆ ದೃಷ್ಟಿಯಿಂದ ನಿರ್ಣಾಯಕ ಸಂದರ್ಭದಲ್ಲಿ ಸ್ಪಷ್ಟ ತೀರ್ಮಾನ ಕೈಗೊಳ್ಳುತ್ತಾರೆ. ಯಾವುದೇ ಸ್ಥಿತಿ ಎದುರಿಸಲು ಸಿದ್ದರಿರುತ್ತಾರೆ. ಈ ಇಬ್ಬರ ಸೇವೆಯನ್ನು ಸಮಾನವಾಗಿ ಗೌರವಿಸಬೇಕಾಗಿದೆ’ ಎಂದರು.
ಆದರೆ, ಎಲ್ಲರಿಗೂ ತಿಳಿದಂತೆ ಪಾಕಿಸ್ತಾನ ಎಂದಿಗೂ ಸರಿ ಆಗುವುದಿಲ್ಲ. ಭಾರತದ ನೆಲ, ನಾಗರಿಕರು, ಗುರುದ್ವಾರ, ದೇಗುಲ ಗುರಿಯಾಗಿಸಿ ದಾಳಿ ನಡೆಸಲು ಆರಂಭಿಸಿತು. ಆದರೆ, ಭಾರತದ ಯೋಧರ ಉತ್ತರ ಪಾಕಿಸ್ತಾನ ಮಂಡಿಯೂರುವಂತೆ ಮಾಡಿದೆ ಎಂದು ಸಚಿವರು ವ್ಯಾಖ್ಯಾನಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ‘ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು, ಭವಿಷ್ಯದಲ್ಲಿ ಪಾಕಿಸ್ತಾನವನ್ನು ಭಯೋತ್ಪಾದನೆಯೇ ನುಂಗಿ ಹಾಕಲಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.