ADVERTISEMENT

ಭಾರತ ಈಗ ದುರ್ಬಲ ರಾಷ್ಟ್ರವಲ್ಲ, ಗಡಿ ರಕ್ಷಣೆಯಲ್ಲಿ ರಾಜಿ ಇಲ್ಲ: ರಾಜನಾಥ್‌ ಸಿಂಗ್‌

ಲಡಾಖ್‌ನ ಪೂರ್ವಭಾಗದ ಗಡಿ: ಚೀನಾ ಜತೆ ಸಂಘರ್ಷ

ಪಿಟಿಐ
Published 14 ಜೂನ್ 2020, 10:15 IST
Last Updated 14 ಜೂನ್ 2020, 10:15 IST
ಭಾನುವಾರ ಹಮ್ಮಿಕೊಂಡಿದ್ದ  ‘ಜಮ್ಮು–ಕಾಶ್ಮೀರ ಜನ ಸಂವಾದ’ ಆನ್‌ಲೈನ್‌ ರ‍್ಯಾಲಿಯನ್ನು ಉದ್ದೇಶಿಸಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಮಾತನಾಡಿದರು  – ಪಿಟಿಐ ಚಿತ್ರ
ಭಾನುವಾರ ಹಮ್ಮಿಕೊಂಡಿದ್ದ  ‘ಜಮ್ಮು–ಕಾಶ್ಮೀರ ಜನ ಸಂವಾದ’ ಆನ್‌ಲೈನ್‌ ರ‍್ಯಾಲಿಯನ್ನು ಉದ್ದೇಶಿಸಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಮಾತನಾಡಿದರು  – ಪಿಟಿಐ ಚಿತ್ರ   

ನವದೆಹಲಿ: ‘ಭಾರತ ತನ್ನ ರಕ್ಷಣಾ ಸಾಮರ್ಥ್ಯವನ್ನು ವೃದ್ಧಿಸಿಕೊಂಡಿದ್ದು, ಈಗ ದುರ್ಬಲ ರಾಷ್ಟ್ರವಾಗಿ ಉಳಿದಿಲ್ಲ. ರಾಷ್ಟ್ರೀಯ ಗೌರವ, ಗಡಿ ರಕ್ಷಣೆಯಂತಹ ವಿಷಯದಲ್ಲಿ ಎಂದಿಗೂ ರಾಜಿ ಆಗುವುದಿಲ್ಲ’ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಭಾನುವಾರ ಇಲ್ಲಿ ಹೇಳಿದರು.

ಜಮ್ಮು–ಕಾಶ್ಮೀರಕ್ಕೆ ಸಂಬಂಧಿಸಿ ಆಯೋಜಿಸಿದ್ದ ಆನ್‌ಲೈನ್‌ ರ‍್ಯಾಲಿಯಲ್ಲಿ ಮಾತನಾಡಿದ ಅವರು, ‘ಗಡಿ ವಿವಾದಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರ ಸಂಸತ್ತನ್ನು ಇಲ್ಲವೇ ದೇಶವನ್ನು ಕತ್ತಲಲ್ಲಿ ಇಡುವುದಿಲ್ಲ’ ಎಂದರು.

‘ಗಡಿ ವಿವಾದ ಕುರಿತ ಬೆಳವಣಿಗೆ– ವಿವರಗಳನ್ನು ಸರಿಯಾದ ಸಮಯದಲ್ಲಿ ಹಂಚಿಕೊಳ್ಳಲಾಗುವುದು’ ಎಂದು ಅವರು ಇದೇ ವೇದಿಕೆ ಮೂಲಕ ವಿರೋಧ ಪಕ್ಷಗಳಿಗೂ ಭರವಸೆ ನೀಡಿದರು.

ADVERTISEMENT

‘ನಮ್ಮ ರಕ್ಷಣಾ ಸಾಮರ್ಥ್ಯವನ್ನು ವೃದ್ಧಿಸಲಾಗಿದೆ. ಈ ಶಕ್ತಿಯನ್ನು ಯಾವುದೇ ದೇಶವನ್ನು ಬೆದರಿಸಲು ಬಳಸುವುದಿಲ್ಲ, ನಮ್ಮ ಗಡಿ ರಕ್ಷಣೆಯೇ ಇದರ ಉದ್ದೇಶ’ ಎಂದೂ ಹೇಳಿದರು.

ಲಡಾಖ್‌ನ ಪೂರ್ವಭಾಗದ ಗಡಿಯಲ್ಲಿ ಉದ್ಭವಿಸಿರುವ ಪ್ರಕ್ಷುಬ್ಧತೆಯನ್ನು ಪ್ರಸ್ತಾಪಿಸಿದ ಅವರು, ‘ನಮ್ಮೊಂದಿಗಿರುವ ವಿವಾದಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವುದಾಗಿ ಚೀನಾ ಹೇಳಿದೆ. ಭಾರತದ ನಿಲುವು ಸಹ ಇದೇ ಆಗಿದೆ’ ಎಂದರು.

ಪಿಒಕೆ ಜನರೂ ಭಾರತ ಸೇರಲು ಇಚ್ಛಿಸಿದ್ದಾರೆ

ಮೋದಿ ಸರ್ಕಾರ, ಜಮ್ಮು ಮತ್ತು ಕಾಶ್ಮೀರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ರಾಜ್ಯದ ಚಹರೆಯನ್ನೇ ಬದಲಾಯಿಸಲಿದೆ. ಆಗ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಪಿಒಕೆ) ಜನರು ತಮ್ಮ ಪ್ರದೇಶವು ಭಾರತದ ಭಾಗವಾಗಬೇಕೆಂದು ಒತ್ತಾಯಿಸಲಿದ್ದಾರೆ ಎಂದು ರಾಜನಾಥ್‌ಸಿಂಗ್‌ ಹೇಳಿದರು.

ಪಿಒಕೆ ಜನರ ಈ ರೀತಿಯ ಒತ್ತಾಯವು ಈ ಪ್ರದೇಶ ಭಾರತದ ಅವಿಭಾಜ್ಯ ಅಂಗ ಎಂಬ ಸಂಸತ್ತಿನ ನಿರ್ಣಯದ ಆಶಯವನ್ನು ಈಡೇರಿಸಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.