ADVERTISEMENT

ತಪ್ಪನ್ನೆಲ್ಲ ನೆಹರೂ ಮೇಲೆ ಹೊರಿಸುವ ಮೋದಿ: ಮನಮೋಹನ್ ಸಿಂಗ್

ಪಂಜಾಬ್ ವಿಧಾನಸಭಾ ಚುನಾವಣೆ: ಪ್ರಧಾನಿ ವಿರುದ್ಧ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2022, 20:15 IST
Last Updated 17 ಫೆಬ್ರುವರಿ 2022, 20:15 IST
ಡಾ. ಮನಮೋಹನ್ ಸಿಂಗ್
ಡಾ. ಮನಮೋಹನ್ ಸಿಂಗ್   

ನವದೆಹಲಿ/ಚಂಡೀಗಡ: ‘ಕೇಂದ್ರದ ಬಿಜೆಪಿ ಸರ್ಕಾರದ ತಪ್ಪುಗಳನ್ನು ತಿದ್ದಿಕೊಳ್ಳುವ ಬದಲು ಪ್ರಧಾನಿ ನರೇಂದ್ರ ಮೋದಿ ಅವರು, ದೇಶದ ಮೊದಲ ಪ್ರಧಾನಿ ಜವಾಹರ್‌ಲಾಲ್ ನೆಹರೂ ಅವರನ್ನು ದೂಷಿಸುತ್ತಾರೆ’ ಎಂದು ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಟೀಕಿಸಿದ್ದಾರೆ.

ಪಂಜಾಬ್‌ ವಿಧಾನಸಭಾ ಚುನಾವಣೆ ಸಂಬಂಧ ಮತದಾರರನ್ನು ಉದ್ದೇಶಿಸಿ ಅವರು ಮಾಡಿರುವ ವಿಡಿಯೊ ಭಾಷಣದಲ್ಲಿ ಈ ಮಾತು ಹೇಳಿದ್ದಾರೆ. ವಿಡಿಯೊ ಸಂದೇಶವನ್ನು ಕಾಂಗ್ರೆಸ್‌ ಗುರುವಾರ ಪ್ರಸಾರ ಮಾಡಿದೆ.

‘ದೇಶದಲ್ಲಿ ನಿರುದ್ಯೋಗದ ಸಮಸ್ಯೆ ಇದೆ. ಕೋವಿಡ್‌ ಸಮಸ್ಯೆ ಇದೆ. ವಿದೇಶಗಳೊಂದಿಗೆ ಸಂಬಂಧ ಹದ
ಗೆಟ್ಟಿದೆ. ದೇಶದ ಆರ್ಥಿಕ ಸ್ಥಿತಿ ಚೆನ್ನಾಗಿಲ್ಲ. ಬಿಜೆಪಿ ಏಳೂವರೆ ವರ್ಷಗಳಿಂದ ಕೇಂದ್ರ
ದಲ್ಲಿ ಸರ್ಕಾರ ನಡೆಸುತ್ತಿದೆ. ಬಿಜೆಪಿ ಸರ್ಕಾರವು ತನ್ನ ತಪ್ಪುಗಳನ್ನು ಒಪ್ಪಿಕೊಳ್ಳು
ವುದು ಮತ್ತು ತಪ್ಪುಗಳನ್ನು ಸರಿಪಡಿಸುವುದನ್ನು ಬಿಟ್ಟು, ಎಲ್ಲಾ ಸಮಸ್ಯೆಗಳಿಗೂ ದೇಶದ ಮೊದಲ ಪ್ರಧಾನಿಯನ್ನು ಹೊಣೆ ಮಾಡುತ್ತಿದೆ’ ಎಂದು ಮನಮೋಹನ್ ಸಿಂಗ್ ಹೇಳಿದ್ದಾರೆ.

ADVERTISEMENT

‘ಪ್ರಧಾನಿ ಹುದ್ದೆಗೆ ಒಂದು ಘನತೆ ಇದೆ. ಸರ್ಕಾರವು ತನ್ನ ತಪ್ಪುಗಳನ್ನು ಮುಚ್ಚಿಕೊಳ್ಳಲು ಇತಿಹಾಸವನ್ನು ದೂಷಿಸ
ಬಾರದು. ನಾನು ಪ್ರಧಾನಿಯಾಗಿದ್ದಾಗ ಜಗತ್ತಿನ ಎದುರು ದೇಶದ ಘನತೆ ಮುಕ್ಕಾಗದಂತೆ ನೋಡಿಕೊಂಡಿದ್ದೆ. ದೇಶದ ಘನತೆಗೆ ಧಕ್ಕೆ ತರುವ ಕೆಲಸವನ್ನು ಎಂದೂ ಮಾಡಿರಲಿಲ್ಲ. ನಾನು ಮೌನಿ, ದುರ್ಬಲ ಮತ್ತು ಭ್ರಷ್ಟ ಎಂದು ನನ್ನ ವಿರುದ್ಧ ಆರೋಪ ಮಾಡಲಾಗಿತ್ತು. ಆ ಆರೋಪ ಮಾಡಿದ್ದ ಬಿಜೆಪಿ ಮತ್ತು ಅದರ ಬಿ–ಟೀಂ ಮತ್ತು ಸಿ–ಟೀಂಗಳೇ ಇಂದು ದೇಶದ ಎದುರು ಬೆತ್ತಲಾಗುತ್ತಿವೆ’ ಎಂದು ಅವರು ಹೇಳಿದ್ದಾರೆ.

‘ಬಿಜೆಪಿಗೆ ದೇಶದ ಆರ್ಥಿಕತೆಯೇ ಅರ್ಥವಾಗಿಲ್ಲ. ವಿದೇಶಾಂಗ ನೀತಿಯಲ್ಲಿಯೂ ಬಿಜೆಪಿ ಸರ್ಕಾರ ವಿಫಲವಾಗಿದೆ. ಚೀನಾ ನಮ್ಮ ನೆಲವನ್ನು ಅತಿಕ್ರಮಿಸಿಕೊಂಡಿದೆ ಮತ್ತು ನಮ್ಮ ಗಡಿಯಲ್ಲಿ ಬಂದು ಕುಳಿತಿದೆ. ಆದರೆ ಸರ್ಕಾರವು ಈ ಅತಿಕ್ರಮಣವನ್ನು ಮುಚ್ಚಿಡಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ’ ಎಂದು ಅವರು ಆರೋಪಿಸಿದ್ದಾರೆ.

‘ವಿದೇಶಿ ನಾಯಕರನ್ನು ಒತ್ತಾಯಪೂರ್ವಕವಾಗಿ ಅಪ್ಪಿಕೊಳ್ಳುವ, ಅವರೊಂದಿಗೆ ಉಯ್ಯಾಲೆಯಲ್ಲಿ ತೂಗುವ ಅಥವಾ ಆಹ್ವಾನವಿರದಿದ್ದರೂ ಬಿರಿಯಾನಿ ತಿನ್ನಲು ಹೋಗುವುದರಿಂದ ವಿದೇಶಾಂಗ ನೀತಿ ರೂಪಿಸಲು ಸಾಧ್ಯವಿಲ್ಲ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಅರ್ಥ ಮಾಡಿಕೊಳ್ಳುತ್ತಾರೆ ಎಂದುಕೊಂಡಿದ್ದೇನೆ’ ಎಂದು ಮನಮೋಹನ್ ಸಿಂಗ್ ಹೇಳಿದ್ದಾರೆ.

‘ಪ್ರಧಾನಿ ನರೇಂದ್ರ ಮೋದಿ ಅವರು ಪಂಜಾಬ್‌ಗೆಈಚೆಗೆ ಭೇಟಿ ನೀಡಿದ್ದಾಗ ಭದ್ರತಾ ಲೋಪವಾಯಿತು ಎಂದು ಆರೋಪಿಸಲಾಗಿತ್ತು. ಅಲ್ಲಿ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಅವರನ್ನು ಗುರಿ ಮಾಡಲಾಗಿತ್ತು. ರೈತರ ಹೋರಾಟದ ವಿಚಾರದಲ್ಲೂ ಪಂಜಾಬಿತನವನ್ನು ಅವಮಾನಿಸಲಾಗಿತ್ತು. ಬಿಜೆಪಿ ಪಂಜಾಬಿಗರನ್ನು ಪದೇ ಪದೇ ಅವಮಾನಿಸಿದೆ’ ಎಂದು ಅವರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

‘ಇಡೀ ಜಗತ್ತಿನಲ್ಲಿ ಪಂಜಾಬಿಗಳನ್ನು ಧೈರ್ಯ, ಶೌರ್ಯ ಮತ್ತು ಪ್ರಾಮಾಣಿಕತೆಗಾಗಿ ಗೌರವಿಸಲಾಗುತ್ತದೆ. ಆದರೆ ಕೇಂದ್ರ ಸರ್ಕಾರವು ಅವಮಾನ ಮಾಡುತ್ತಿದೆ. ಒಬ್ಬ ಧೀರ ಪಂಜಾಬಿಯಾಗಿ ನನಗೆ ಇವೆಲ್ಲಾ ತೀವ್ರ ನೋವನ್ನುಂಟು ಮಾಡಿದೆ’ ಎಂದು ಅವರು ಹೇಳಿದ್ದಾರೆ.

***

ನಾನೂ ಪ್ರಧಾನಿಯಾಗಿ 10 ವರ್ಷ ಆಳ್ವಿಕೆ ನಡೆಸಿದ್ದೇನೆ. ನಾನು ಹೆಚ್ಚು ಮಾತನಾಡುತ್ತಿರಲಿಲ್ಲ. ಆದರೆ ನನ್ನ ಕೆಲಸಗಳು ಮಾತನಾಡುತ್ತಿದ್ದವು

-ಮನಮೋಹನ್ ಸಿಂಗ್, ಮಾಜಿ ಪ್ರಧಾನಿ

***

ಚೀನಾದ ವಿಚಾರದಲ್ಲಿ ಎಲ್ಲವೂ ಸ್ಪಷ್ಟವಾಗಿದೆ. ಚೀನಾ ಜತೆಗೆ ಈ ಸಂಬಂಧ ಮಾತುಕತೆ ನಡೆಯುತ್ತಲೇ ಇದೆ. ಮನಮೋಹನ್ ಅವರದ್ದು ಸಂಪೂರ್ಣ ರಾಜಕೀಯ ಭಾಷಣ

-ವಿದೇಶಾಂಗ ವ್ಯವಹಾರಗಳ ಸಚಿವಾಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.