ನವದೆಹಲಿ: ದೇಶದ ಪ್ರಮುಖ ಸರಕು ತಯಾರಿಕಾ ಉದ್ದಿಮೆಗಳಲ್ಲಿ ವಹಿವಾಟಿಗೆ ಸಂಬಂಧಿಸಿದ ಉತ್ಸಾಹ ಕಡಿಮೆಯಾಗಿರುವುದು ಭಾರತೀಯ ರಿಸರ್ವ್ ಬ್ಯಾಂಕ್ನ ಸಮೀಕ್ಷೆಯಲ್ಲಿ ತಿಳಿದು ಬಂದಿದೆ.
ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದ ಅನಿಶ್ಚಿತತೆ ಅಥವಾ ದೇಶಿ ಬ್ಯಾಂಕ್ಗಳ ಮೇಲಿನ ನಿರಂತರ ಒತ್ತಡದ ಕಾರಣಕ್ಕೆ 1,265 ಉದ್ದಿಮೆ ಸಂಸ್ಥೆಗಳಲ್ಲಿ ವಹಿವಾಟಿನ ಆತ್ಮವಿಶ್ವಾಸ ಕುಗ್ಗಿದೆ. ಬ್ಯಾಂಕ್ಗಳಿಂದ ತಮಗೆ ಸಿಗಬೇಕಾದ ಹಣಕಾಸಿನ ಸೌಲಭ್ಯವು ಕಡಿಮೆಯಾಗಿ ತಯಾರಿಕೆ ಚಟುವಟಿಕೆ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎನ್ನುವ ಆತಂಕವು ಕಾರ್ಪೊರೇಟ್ಗಳಲ್ಲಿ ಮನೆ ಮಾಡಿದೆ.
ದೇಶಿ ಸರಕು ತಯಾರಿಕಾ ವಲಯದ ವಹಿವಾಟಿನ ಆತ್ಮವಿಶ್ವಾಸವು, ಪ್ರಸಕ್ತ ಹಣಕಾಸು ವರ್ಷದ ಡಿಸೆಂಬರ್ ತ್ರೈಮಾಸಿಕದಲ್ಲಿ ಐದು ತ್ರೈಮಾಸಿಕಗಳ ಕನಿಷ್ಠ ಮಟ್ಟವಾದ 107.1 ಅಂಶಗಳಿಗೆ ಕುಸಿದಿದೆ. ಗರಿಷ್ಠ ಮುಖಬೆಲೆಯ ನೋಟುಗಳನ್ನು ರದ್ದು ಮಾಡಿದ ಸಂದರ್ಭದಲ್ಲಿ ಈ ಆತ್ಮವಿಶ್ವಾಸವು 106 ಅಂಶಗಳಿಗೆ ಕುಸಿದಿತ್ತು. ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಜಾರಿಗೆ ತಂದ ಆರಂಭದ ತಿಂಗಳಲ್ಲಿ (2017–18ನೆ ಸಾಲಿನ ಮಾರ್ಚ್ ತ್ರೈಮಾಸಿಕ) ಇದು 112.4 ಅಂಶಗಳಿಗೆ ತಲುಪಿತ್ತು. ಉದ್ದಿಮೆ ಸಂಸ್ಥೆಗಳಲ್ಲಿನ ಗುಣಾತ್ಮಕ ವಹಿವಾಟಿನ ಪರಿಸ್ಥಿತಿಯನ್ನು ಈ ಸಮೀಕ್ಷೆಯು ಪ್ರತಿಬಿಂಬಿಸುತ್ತದೆ.
ತಯಾರಿಕಾ ವಲಯದಲ್ಲಿನ ಬೇಡಿಕೆ ಮತ್ತು ಉತ್ಪಾದನಾ ಮಟ್ಟವು ಹಿಂದಿನ ಐದು ತ್ರೈಮಾಸಿಕಗಳಲ್ಲಿ ಕುಸಿಯುತ್ತಲೇ ಇದೆ. ಉದ್ದಿಮೆ ಸಂಸ್ಥೆಗಳು ಸರಕುಗಳನ್ನು ತಯಾರಿಸುತ್ತಿದ್ದರೂ ಅಷ್ಟೇ ಪ್ರಮಾಣದಲ್ಲಿ ಅವುಗಳನ್ನು ಖರೀದಿಸುವವರು ಮುಂದೆ ಬರುತ್ತಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.