ಬೆಂಗಳೂರು: ‘ಹಿಂದೂ ಮಹಾಸಾಗರ ಪ್ರದೇಶದ (ಐಒಆರ್) ಸದಸ್ಯ ರಾಷ್ಟ್ರ ಗಳಿಗೆ ಯುದ್ಧೋಪಕರಣಗಳನ್ನು
ಪೂರೈಸಲು ಭಾರತ ಸಿದ್ಧವಿದೆ’ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು.
ಹಿಂದೂ ಮಹಾಸಾಗರ ಪ್ರದೇಶ (ಐಒಆರ್) ವ್ಯಾಪ್ತಿಯ ರಕ್ಷಣಾ ಸಚಿವರ ಸಮಾವೇಶ ನಗರದ ಖಾಸಗಿ ಹೋಟೆಲ್ನಲ್ಲಿ ಗುರುವಾರ ನಡೆಯಿತು.
ಸಮಾವೇಶದ ನೇತೃತ್ವ ವಹಿಸಿ ಮಾತನಾಡಿದ ಅವರು, ‘ಭಾರತವು ವಿವಿಧ ಬಗೆಯ ಕ್ಷಿಪಣಿ ತಂತ್ರಜ್ಞಾನ ಅಥವಾ ವ್ಯವಸ್ಥೆ, ಹೆಲಿಕಾಪ್ಟರ್, ಬಹು ಉದ್ದೇಶದ ಲಘುಸಾರಿಗೆ ವಿಮಾನ, ಗಸ್ತುವಾಹನಗಳು, ಯುದ್ಧೋಪಕರಣ, ಟ್ಯಾಂಕರ್, ರೆಡಾರ್, ಸೇನಾ ವಾಹನ, ವಿದ್ಯುನ್ಮಾನ ಯುದ್ಧ ತಂತ್ರಾಂಶವನ್ನು ಸದಸ್ಯ ರಾಷ್ಟ್ರಗಳಿಗೆ ಪೂರೈಸಲು ಸಿದ್ಧ ವಿದೆ’ ಎಂದರು.
‘ಸದಸ್ಯ ರಾಷ್ಟ್ರಗಳ ನಡುವೆ ಪರಸ್ಪರ ಶಾಂತಿ–ಸಹಕಾರ ವೃದ್ಧಿಸಲು ಪ್ರಧಾನಿ ನರೇಂದ್ರ ಮೋದಿಯವರ ಸಮ್ಮಾನ್ (ಗೌರವ), ಸಂವಾದ, ಸಹಕಾರ, ಶಾಂತಿ ಮತ್ತು ಸಮೃದ್ಧಿ ಎಂಬ ಐದು ‘ಎಸ್’ಗಳ ಅಡಿಯಲ್ಲಿ ಕಾರ್ಯನಿರ್ವಹಿಸಲು ಭಾರತ ಉತ್ಸುಕವಾಗಿದೆ’ ಎಂದು ಅವರು ಹೇಳಿದರು.
‘ಐಒಆರ್ ಸದಸ್ಯ ರಾಷ್ಟ್ರಗಳ ಪೈಕಿ ಭಾರತ ದೊಡ್ಡ ದೇಶ. 7,500 ಕಿ.ಮೀ.ನಷ್ಟು ಕರಾವಳಿ ತೀರ ಪ್ರದೇಶವನ್ನು ದೇಶ ಹೊಂದಿದೆ. ಪ್ರದೇಶದಲ್ಲಿ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ಭಾರತ ಸಕ್ರಿಯ ವಾಗಿದೆ’ ಎಂದರು.
‘ಸಾಗರದ ಮೂಲಕ ನಡೆಯುವ ಜಾಗತಿಕ ವ್ಯಾಪಾರದ ಪೈಕಿ ಶೇ 75 ರಷ್ಟು ವ್ಯಾಪಾರ–ವಹಿವಾಟು ಇದೇ ಮಾರ್ಗದಲ್ಲಿ ನಡೆಯುತ್ತದೆ. ನಿತ್ಯ ಸರಕು–ಸಾಗಣೆಯ ಪ್ರಮಾಣದ ಪೈಕಿ ಶೇ 50ರಷ್ಟು ಸರಕುಗಳು ಇದೇ ಮಾರ್ಗದಲ್ಲಿ ಸಾಗುತ್ತವೆ’ ಎಂದರು.
ಒಟ್ಟು 28 ಸದಸ್ಯ ರಾಷ್ಟ್ರಗಳ ಪೈಕಿ ಇಂಡೊನೇಷ್ಯಾ, ಬಾಂಗ್ಲಾದೇಶ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಯೆಮನ್, ಸೋಮಾಲಿಯಾ, ಮಡ ಗಾಸ್ಕರ್ ಸೇರಿದಂತೆ 27 ಸದಸ್ಯ ರಾಷ್ಟ್ರಗಳ ರಾಯಭಾರಿಗಳು, ಉನ್ನತ ಅಧಿಕಾರಿಗಳು ಭೌತಿಕ ಮತ್ತು ವರ್ಚುವಲ್ ರೂಪದಲ್ಲಿ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.
ರಕ್ಷಣಾ ಕಾರ್ಯದರ್ಶಿ ಡಾ. ಅಜಯ್ಕುಮಾರ್, ಕಾರ್ಯದರ್ಶಿ (ರಕ್ಷಣಾ ಉತ್ಪನ್ನ) ರಾಜಕುಮಾರ್, ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್, ನೌಕಾಪಡೆ ಮುಖ್ಯಸ್ಥ ಕರಮ್ಬೀರ್ ಸಿಂಗ್, ಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವಣೆ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.