ನವದೆಹಲಿ: ಇಲ್ಲಿ ನಡೆದ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಅಯೋಧ್ಯೆಯ ಪರಂಪರೆಯನ್ನು ಬಿಂಬಿಸುವ ಉತ್ತರ ಪ್ರದೇಶದ ಸ್ತಬ್ಧಚಿತ್ರವು ಮೊದಲ ಸ್ಥಾನ ಗಳಿಸಿದೆ.
ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ರಾಮಮಂದಿರದ ಮಾದರಿ ಒಳಗೊಂಡ, ಅಯೋಧ್ಯೆಯ ಪರಂಪರೆಯನ್ನು ಬಿಂಬಿಸುವ ಉತ್ತರ ಪ್ರದೇಶದ ಸ್ತಬ್ಧಚಿತ್ರ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಎಲ್ಲರ ಗಮನ ಸೆಳೆದಿದೆ.
ಸ್ತಬ್ಧಚಿತ್ರದ ಬಹುಪಾಲು ಸ್ಥಳವನ್ನು ರಾಮಮಂದಿರದ ಮಾದರಿ ಆವರಿಸಿದ್ದರೆ, ಮುಂಭಾಗ ಮಹರ್ಷಿ ವಾಲ್ಮೀಕಿ ಕುಳಿತ ಭಂಗಿಯಲ್ಲಿರುವ ಎತ್ತರದ ಮೂರ್ತಿ ಇತ್ತು. ಸಂತರ ವೇಷದಲ್ಲಿದ್ದ ಹಲವರು, ಕರಕುಶಲ ಕಲಾವಿದರು ಇದ್ದರು.
ಸ್ತಬ್ಧಚಿತ್ರದ ಒಂದು ಬದಿಯಲ್ಲಿ, ಗಿನ್ನಿಸ್ ದಾಖಲೆಗೆ ಸೇರಿರುವ ಅಯೋಧ್ಯೆಯ ದೀಪೋತ್ಸವ ಆಚರಣೆಯ ವಿವರಗಳಿದ್ದವು. ಉಳಿದಂತೆ, ಶ್ರೀರಾಮ, ಶಬರಿ, ಅಹಿಲ್ಯಾ, ಹನುಮಾನರ ಉಬ್ಬುಕಲಾಕೃತಿಗಳು ಇದ್ದವು. ಉತ್ತರ ಪ್ರದೇಶ, ಕರ್ನಾಟಕ ಸೇರಿ ವಿವಿಧ ರಾಜ್ಯಗಳ 17 ಸ್ತಬ್ಧಚಿತ್ರಗಳು ಪಥಸಂಚಲನದಲ್ಲಿ ಭಾಗಿಯಾಗಿದ್ದವು.
ಗಣರಾಜ್ಯೋತ್ಸವ ಪಥಸಂಚಲನದಲ್ಲಿ ತ್ರಿಪುರಾದ ಸ್ತಬ್ಧಚಿತ್ರವು ಎರಡನೇ ಸ್ಥಾನ ಗಳಿಸಿದರೆ, ಉತ್ತರಖಾಂಡ ರಾಜ್ಯವು ಮೂರನೇ ಸ್ಥಾನವನ್ನು ತನ್ನದಾಗಿಸಿಕೊಂಡಿದೆ.
ಕಲೆ, ಸಂಸ್ಕೃತಿ, ಚಿತ್ರಕಲೆ, ಶಿಲ್ಪಕಲೆ, ಸಂಗೀತ, ವಸ್ತುಶಿಲ್ಪ, ನೃತ್ಯ ಸಂಯೋಜನೆ ಮತ್ತಿತರ ಕ್ಷೇತ್ರಗಳ ಪ್ರಮುಖ ವ್ಯಕ್ತಿಗಳನ್ನು ಒಳಗೊಂಡಿರುವ ತಜ್ಞರ ಸಮಿತಿ ಸಾಕಷ್ಟು ಸಭೆಗಳನ್ನು ನಡೆಸಿ, ಪರಿಶೀಲಿಸಿ ಸ್ತಬ್ಧಚಿತ್ರವನ್ನು ಆಯ್ಕೆ ಮಾಡುತ್ತದೆ. ಈ ಸಮಿತಿಯು ಸ್ತಬ್ಧಚಿತ್ರಗಳ ವಿಷಯ, ಪರಿಕಲ್ಪನೆ, ವಿನ್ಯಾಸ ಮತ್ತು ಅದರ ದೃಶ್ಯ ಪ್ರಭಾವದ ಆಧಾರದ ಮೇಲೆ ಆಯ್ಕೆಗೆ ಶಿಫಾರಸು ಮಾಡುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.