ADVERTISEMENT

ಕುತುಬ್‌ ಮಿನಾರ್ ಆವರಣ: ಹಿಂದೂ, ಜೈನ ದೇವತೆಗಳ ಜೀರ್ಣೋದ್ಧಾರ –ಕೋರ್ಟ್‌ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2022, 8:53 IST
Last Updated 25 ಆಗಸ್ಟ್ 2022, 8:53 IST
ಕುತುಬ್ ಮಿನಾರ್
ಕುತುಬ್ ಮಿನಾರ್   

ನವದೆಹಲಿ (ಪಿಟಿಐ): ದೆಹಲಿ ನ್ಯಾಯಾಲಯದ ಎದುರು ಬುಧವಾರ ಕುತುಬ್ ಮಿನಾರ್ ಆಸ್ತಿಯ ಮಾಲೀಕತ್ವ ಹೊಂದುವ ಮನವಿ ವಿರೋಧಿಸಿದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ), ಮಧ್ಯಸ್ಥಿಕೆ ಅರ್ಜಿ ಆಧಾರರಹಿತ ಮತ್ತು ತಾರ್ಕಿಕ ರಹಿತವಾಗಿದೆ ಎಂದು ಹೇಳಿದೆ.

ಕುತುಬ್ ಮಿನಾರ್ ದೇವಾಲಯದ ಸಂಕೀರ್ಣದೊಳಗೆ ದೇವತೆಗಳ ಜೀರ್ಣೋದ್ಧಾರ ಕೋರಿ ಸಲ್ಲಿಸಲಾದ ಮೇಲ್ಮನವಿಯಲ್ಲಿ ಮಧ್ಯಸ್ಥಿಕೆದಾರರು ಅಗತ್ಯ ಕಕ್ಷಿದಾರರು ಎಂದು ಹೇಳುವ ಮನವಿಯನ್ನು ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ.

ಜೂನ್ 9 ರಂದು ಸಲ್ಲಿಸಲಾದ ಅರ್ಜಿಯಲ್ಲಿ ಕುನ್ವರ್ ಮಹೇಂದರ್ ಧ್ವಜ್ ಪ್ರತಾಪ್ ಸಿಂಗ್ ಅವರು ಯುನೈಟೆಡ್ ಪ್ರಾವಿನ್ಸ್ ಆಫ್ ಆಗ್ರಾದ ಉತ್ತರಾಧಿಕಾರಿಯಾಗಿದ್ದು, ಕುತುಬ್ ಮಿನಾರ್‌ನ ಆಸ್ತಿ ಸೇರಿದಂತೆ ದೆಹಲಿ ಮತ್ತು ಸುತ್ತಮುತ್ತಲಿನ ಹಲವಾರು ನಗರಗಳಲ್ಲಿನ ಜಮೀನುಗಳ ಮಾಲೀಕರಾಗಿದ್ದಾರೆ ಎಂದು ಹೇಳಲಾಗಿದೆ.

ADVERTISEMENT

ಪ್ರಸ್ತುತ ಮೇಲ್ಮನವಿಯಲ್ಲಿ ಯಾವುದೇ ಹಕ್ಕು ಪ್ರತಿಪಾದಿಸಲು ಸಾಕಾಗುವುದಿಲ್ಲ ಹಾಗೂ ದೆಹಲಿ ಮತ್ತು ಸುತ್ತಮುತ್ತಲಿನ ಜಮೀನುಗಳ ಮಾಲೀಕತ್ವದ ಮಧ್ಯಸ್ಥಿಕೆಯ ಹಕ್ಕು 1947 ರಿಂದ ಯಾವುದೇ ನ್ಯಾಯಾಲಯದ ಮುಂದೆ ಪ್ರಸ್ತಾಪಿಸಲಾಗಿಲ್ಲ. ‌ವಸೂಲಾತಿ ಅಥವಾ ಸ್ವಾಧೀನ ಅಥವಾ ತಡೆಯಾಜ್ಞೆಗಾಗಿ ಪ್ರಕರಣ ಸಲ್ಲಿಸುವ ಸಮಯ ಹಲವು ದಶಕಗಳಿಂದ ಮುಕ್ತಾಯಗೊಂಡಿದೆ. ಹಾಗಾಗಿ ಮಾಲೀಕತ್ವದ ಹಕ್ಕು ಮತ್ತು ಆಸ್ತಿಯಲ್ಲಿ ಹಸ್ತಕ್ಷೇಪ ತಡೆಗಟ್ಟುವ ಹಕ್ಕು ಕೊನೆಗೊಂಡಿದೆ ಎಂದು ಎಎಸ್‌ಐ ಹೇಳಿದೆ.

ಕಾನೂನಿನ ಪ್ರಕಾರ 1913 ರಲ್ಲಿ ಕುತುಬ್ ಮಿನಾರ್ ಅನ್ನು ಸಂರಕ್ಷಿತ ಸ್ಮಾರಕವೆಂದು ಘೋಷಿಸಿದಾಗ, ಆ ಅವಧಿಯಲ್ಲಿ ಯಾರೂ ಆಕ್ಷೇಪಣೆಗಳನ್ನು ಎತ್ತಲಿಲ್ಲ. ಮಧ್ಯಸ್ಥಿಕೆದಾರರು ಭೂಮಿ ಮಾಲೀಕತ್ವವನ್ನು ಪ್ರಶ್ನಿಸಲಿಲ್ಲ ಮತ್ತು ಸ್ವಾಧೀನಪಡಿಸಿಕೊಳ್ಳಲಿಲ್ಲ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.