ADVERTISEMENT

ಮನೆ, ಮನೆಗೆ ತೆರಳಿ ಲಸಿಕೆ: | ಮರು ಚಿಂತನೆ ಅಗತ್ಯ: ಕೇಂದ್ರಕ್ಕೆ ಕೋರ್ಟ್ ಸಲಹೆ

ಪಿಟಿಐ
Published 20 ಮೇ 2021, 15:05 IST
Last Updated 20 ಮೇ 2021, 15:05 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮುಂಬೈ (ಪಿಟಿಐ): ‘ಹಿರಿಯ ನಾಗರಿಕರು, ಅಶಕ್ತರು, ಅಂಗವಿಕಲರಿಗೆ ಲಸಿಕೆಯನ್ನು ನೀಡಲು ಮನೆ, ಮನೆಗೆ ತೆರಳುವ ಬಗ್ಗೆ ಮರುಚಿಂತಿಸಬೇಕು‘ ಎಂದು ಬಾಂಬೆ ಹೈಕೋರ್ಟ್‌ ಕೇಂದ್ರ ಸರ್ಕಾರಕ್ಕೆ ಸಲಹೆ ಮಾಡಿದೆ.

ಲಸಿಕೆಯು ಪೋಲಾಗುವುದು, ಪ್ರತಿಕೂಲ ಪರಿಣಾಮವಾಗುವ ಸಾಧ್ಯತೆ ಸೇರಿ ವಿವಿಧ ಕಾರಣಗಳಿಂದ ಮನೆ, ಮನೆಗೆ ತೆರಳಿ ಲಸಿಕೆ ನೀಡಲಾಗದು ಎಂದು ಕೇಂದ್ರ ತಿಳಿಸಿದೆ. ಇದು, ನಿರಾಶದಾಯಕ ಬೆಳವಣಿಗೆ. ಕೇಂದ್ರ ಮತ್ತು ಮುಂಬೈ ಮಹಾನಗರಪಾಲಿಕೆಯು ಈ ಬಗ್ಗೆ ಮರುಚಿಂತನೆ ನಡೆಸಬೇಕು ಎಂದು ಕೋರ್ಟ್ ಹೇಳಿದೆ.

ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತಾ ಮತ್ತು ನ್ಯಾಯಮೂರ್ತಿ ಜಿ.ಎಸ್‌.ಕುಲಕರ್ಣಿ ಅವರಿದ್ದ ಪೀಠವು, ಲಸಿಕೆ ಅಭಿಯಾನ ಕುರಿತುಕೇಂದ್ರ ಸರ್ಕಾರವು ರಚಿಸಿರುವ ರಾಷ್ಟ್ರೀಯ ಪರಿಣತರ ತಂಡಕ್ಕೆ ಈ ಬಗ್ಗೆ ಸೂಚನೆ ನೀಡಿತು. ಪ್ರಕರಣದ ವಿಚಾರಣೆಯನ್ನು ಜೂನ್‌ 2ಕ್ಕೆ ಮುಂದೂಡಲಾಯಿತು.

ADVERTISEMENT

ರಾಷ್ಟ್ರೀಯ ಪರಿಣತರ ತಂಡ ಒಂದು ವೇಳೆ ಮನೆ ಮನೆಗೆ ತೆರಳಿ ಲಸಿಕೆ ನೀಡಲು ಸಮ್ಮತಿಸಿದರೆ ಅದಕ್ಕಾಗಿ ಕೋರ್ಟ್‌ ಆದೇಶಕ್ಕಾಗಿ ಕಾಯದೆ ತ್ವರಿತಗತಿಯಲ್ಲಿ ಅಭಿಯಾನ ಆರಂಭಿಸಬೇಕು ಎಂದು ಕೋರ್ಟ್‌ ಮುಂಬೈ ಮಹಾನಗರಪಾಲಿಕೆಗೆ ಸೂಚಿಸಿತು.

ಪ್ರತಿಕೂಲ ಪರಿಣಾಮ ಬೀರಬಹುದು ಎಂದರೆ ತಜ್ಞರ ಸಮಿತಿಯು, ನಿರ್ದಿಷ್ಟ ಲಸಿಕೆಯನ್ನು ನೀಡಿದ್ದರಿಂದ ವ್ಯಕ್ತಿಯ ಮೇಲೆ ನಕಾರಾತ್ಮಕ ಪರಿಣಾಮ ಉಂಟಾದುದರ ಬಗ್ಗೆ ಖಚಿತವಾದ ವೈಜ್ಞಾನಿಕ ಅಂಕಿ ಅಂಶಗಳನ್ನು ಒದಗಿಸಬೇಕು. ಅಂತಹ ಒಂದಾದರೂ ನಿದರ್ಶನವಿದೆಯಾ? ತಜ್ಞರ ಸಮಿತಿಯು ಖಚಿತ ಮಾಹಿತಿ ಆಧರಿಸಿ ತೀರ್ಮಾನ ಕೈಗೊಳ್ಳಬೇಕು. ‘ಆದರೆ, ಆಗಬಹುದು‘ ಎಂಬ ಹೇಳಿಕೆಯನ್ನು ಆಧರಿಸಿ ಆಲ್ಲ. ಬ್ರಿಟನ್‌ನಲ್ಲಿ ಇದೇ ಕೋವಿಶೀಲ್ಡ್ ಲಸಿಕೆಯನ್ನು ಮನೆ ಮನೆಗೆ ತೆರಳಿ ನೀಡಲಾಗುತ್ತಿದೆ ಎಂದೂ ಕೋರ್ಟ್ ತಿಳಿಸಿತು.

ಕೇಂದ್ರ ಸರ್ಕಾರ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದ ನಂತರವೇ ತಾನು ಮನೆ, ಮನೆಗೆ ತೆರಳಿ ಲಸಿಕೆ ನೀಡುವ ಕಾರ್ಯಕ್ರಮ ಆರಂಭಿಸುವುದಾಗಿ ಪ್ರಮಾಣಪತ್ರ ಸಲ್ಲಿಸಿದ್ದಕ್ಕಾಗಿ ಮುಂಬೈ ಮಹಾನಗರಪಾಲಿಕೆಯನ್ನು (ಬಿಎಂಸಿ) ಕೋರ್ಟ್‌ ತರಾಟೆಗೆ ತೆಗೆದುಕೊಂಡಿತು.

ಮುಂಬೈ ನಗರಪಾಲಿಕೆ ತನ್ನ ಕೆಲಸಗಳಗೆ ಪ್ರಚಾರ ಪಡೆಯಲು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದೆ. ಆದರೆ, ಮನೆ, ಮನೆಗೆ ತೆರಳಿ ಲಸಿಕೆ ನೀಡಲು ಸಿದ್ಧವಿಲ್ಲ. ಇಂಥ ತಾರತಮ್ಯ ಸಲ್ಲದು ಎಂದು ಹೇಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.