ADVERTISEMENT

ಗಾಂಧಿ ಕುಟುಂಬಕ್ಕೆ ಕಾರ್ಯಕರ್ತರ ಹೃದಯದಲ್ಲಿ ವಿಶೇಷ ಸ್ಥಾನವಿದೆ: ಶಶಿ ತರೂರ್‌

ಪಿಟಿಐ
Published 19 ಅಕ್ಟೋಬರ್ 2022, 12:52 IST
Last Updated 19 ಅಕ್ಟೋಬರ್ 2022, 12:52 IST
ಶಶಿ ತರೂರ್
ಶಶಿ ತರೂರ್   

ನವದೆಹಲಿ: ‘ಕಾಂಗ್ರೆಸ್‌ ಪಕ್ಷವನ್ನು ಪುನಶ್ಚೇತನಗೊಳಿಸುವ ಕಾರ್ಯ ಆರಂಭವಾಗಿದೆ’ ಎಂದು ಸಂಸದ ಹಾಗೂ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಶಶಿ ತರೂರ್‌ ಬುಧವಾರ ಹೇಳಿದ್ದಾರೆ.

ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಪಕ್ಷದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬೆನ್ನಲ್ಲೇ ಅವರಿಂದ ಈ ಹೇಳಿಕೆ ಹೊರಬಿದ್ದಿದೆ.

‘ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಪ್ರಜಾಸತ್ತಾತ್ಮಕವಾಗಿ ಸ್ಪರ್ಧೆ ನಡೆಯಿತು. ಇದು ಪಕ್ಷದ ಎಲ್ಲ ಹಂತಗಳಲ್ಲಿ ಉತ್ಸಾಹವನ್ನು ಹೆಚ್ಚಿಸಿದೆ. ಸಂಘಟನಾತ್ಮಕವಾಗಿ ಪಕ್ಷದಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಆರೋಗ್ಯಕರ ಹಾಗೂ ರಚನಾತ್ಮಕ ಚರ್ಚೆಗೆ ಈ ಚುನಾವಣೆ ಕಾರಣವಾಗಿದೆ’ ಎಂದು ಅವರು ಇಲ್ಲಿ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

‘ನೆಹರೂ–ಗಾಂಧಿ ಕುಟುಂಬಕ್ಕೆ ಪಕ್ಷದ ಕಾರ್ಯಕರ್ತರ ಹೃದಯದಲ್ಲಿ ವಿಶೇಷ ಸ್ಥಾನ ಇದೆ. ಗಾಂಧಿ ಕುಟುಂಬವು ಎಂದಿಗೂ ಕಾಂಗ್ರೆಸ್‌ನ ಆಧಾರಸ್ತಂಭವಾಗಿ ಉಳಿಯಲಿದೆ. ಈ ಕುಟುಂಬವೇ ನಮ್ಮ ಆತ್ಮಸಾಕ್ಷಿ ಹಾಗೂ ಮಾರ್ಗದರ್ಶನ ನೀಡುವ ಶಕ್ತಿಯಾಗಿರಲಿದೆ’ ಎಂದಿದ್ದಾರೆ.

‘ಭಾರತ್‌ ಜೋಡೊ ಯಾತ್ರೆಗೆ ಉತ್ತಮ ಸ್ಪಂದನೆ ದೊರೆಯುತ್ತಿದ್ದು, ಯಶಸ್ವಿಯಾಗಿ ನಡೆಯುತ್ತಿದೆ. ಗಾಂಧಿ ಕುಟುಂಬವು ಹೊಂದಿರುವ ಜನಪರ ಕಾಳಜಿಗೆ ಈ ಯಾತ್ರೆ ಪುರಾವೆಯಾಗಿದೆ’ ಎಂದು ತಿಳಿಸಿದ್ದಾರೆ.

"ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್‌ ಪಕ್ಷಕ್ಕೆ ಸಮರ್ಥ ನಾಯಕತ್ವ ನೀಡುವ ವಿಶ್ವಾಸ ಇದೆ. ಸಾಂಘಿಕ ಪ್ರಯತ್ನದಿಂದ ನಾವು ಪಕ್ಷವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತೇವೆ"

–ಶಶಿ ತರೂರ್, ಕಾಂಗ್ರೆಸ್‌ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.