ADVERTISEMENT

ಭೂಕುಸಿತದಿಂದ ಬಂದ್‌ ಆಗಿದ್ದ ರಿಷಿಕೇಶ–ಬದರಿನಾಥ ಹೆದ್ದಾರಿ ಸಂಚಾರಕ್ಕೆ ಮುಕ್ತ

ಪಿಟಿಐ
Published 8 ಆಗಸ್ಟ್ 2023, 16:34 IST
Last Updated 8 ಆಗಸ್ಟ್ 2023, 16:34 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನ್ಯೂ ತೆಹ್ರಿ: ಅಟಾಲಿ ಬಳಿ ಭಾರಿ ಭೂಕುಸಿತ ಉಂಟಾಗಿದ್ದರಿಂದ 19 ಗಂಟೆಗಳ ಕಾಲ ಬಂದ್‌ ಆಗಿದ್ದ ರಿಷಿಕೇಶ–ಬದರಿನಾಥ ಹೆದ್ದಾರಿ ಮಂಗಳವಾರ ಸಂಚಾರಕ್ಕೆ ಮುಕ್ತಗೊಂಡಿತು.

ಸೋಮವಾರ ಸಂಜೆ 7 ಗಂಟೆಗೆ ಭೂಕುಸಿತ ಸಂಭವಿಸಿದ್ದು, ಹೆದ್ದಾರಿಯಲ್ಲಿ ಅನೇಕ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಭೂಕುಸಿತದಿಂದಾಗಿ ದೊಡ್ಡ ಪ್ರಮಾಣದಲ್ಲಿ ಮಣ್ಣು ರಸ್ತೆಯ ಮೇಲೆ ಬಿದ್ದಿತ್ತು. ವಾಹನ ಸಂಚಾರವನ್ನು ಪರ್ಯಾಯ ಮಾರ್ಗಗಳಿಗೆ ತಿರುಗಿಸಲು ಅಧಿಕಾರಿಗಳು ಮುಂದಾಗಿದ್ದರು.

ತೋಟಘಾಟಿ ಮತ್ತು ಸಿಂಗ್ಟೋಲಿಯಲ್ಲಿ ಮತ್ತೆ ಎರಡು ಭೂಕುಸಿತಗಳು ಸಂಭವಿಸಿವೆ ಎಂದು ನರೇಂದ್ರ ನಗರದ ಎಸ್‌ಡಿಎಂ ದೇವೇಂದ್ರ ನೇಗಿ ತಿಳಿಸಿದ್ದಾರೆ.

ADVERTISEMENT

ನಿರ್ಮಾಣ ಸಂಸ್ಥೆಗಳು 17 ಗಂಟೆಗಳ ನಂತರ ರಸ್ತೆಯ ಅವಶೇಷಗಳನ್ನು ತೆರವುಗೊಳಿಸಿದವು. ಮಧ್ಯಾಹ್ನದ ನಂತರ ಲಘು ವಾಹನ ಮತ್ತು ಭಾರಿ ವಾಹನಗಳ ಸಂಚಾರಕ್ಕೆ ಸಂಚಾರಕ್ಕೆ ಮುಕ್ತಗೊಳಿಸಲಾಯಿತು.‌

ಸೋಮವಾರ ಸಂಜೆ ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟಾದ ನಂತರ ತೆಹ್ರಿ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಮಯೂರ್‌ ದೀಕ್ಷಿತ್‌ ಅವರು ವಾಹನಗಳ ಸಂಚಾರಕ್ಕೆ ಪರ್ಯಾಯ ಮಾರ್ಗಗಳನ್ನು ಸೂಚಿಸಿದರು. ಇದೀಗ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಸಹಜ ಸ್ಥಿತಿಗೆ ತಲುಪಿದ್ದು, ಮಳೆ ಮುಂದುವರಿದಿದೆ. ಪೊಲೀಸರು ಮತ್ತು ಎನ್‌ಎಚ್‌ಎಐ ಸಿಬ್ಬಂದಿಗಳಿಗೆ ನಿಗಾ ಇರಿಸಲು ತಿಳಿಸಲಾಗಿದೆ ಎಂದು ದೀಕ್ಷಿತ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.