ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಗೋದಾವರಿ–ಕೃಷ್ಣಾ– ಕಾವೇರಿ ನದಿ ಜೋಡಣೆ ಯೋಜನೆಯ ನೀರು ಹಂಚಿಕೆ ವಿಧಾನಕ್ಕೆ ಕರ್ನಾಟಕ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದೆ.
ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅಧ್ಯಕ್ಷತೆಯಲ್ಲಿ ನವದೆಹಲಿಯಲ್ಲಿ ಮಂಗಳವಾರ ನಡೆದ ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆಯ 36ನೇ ವಾರ್ಷಿಕ ಸಾಮಾನ್ಯ ಸಭೆ ಹಾಗೂ ನದಿ ಜೋಡಣೆ ಸಮಿತಿಯ 20ನೇ ಸಭೆಯಲ್ಲಿ ಪಾಲ್ಗೊಂಡ ಕರ್ನಾಟಕದ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ರಾಜ್ಯದ ನಿಲುವನ್ನು ತಿಳಿಸಿದರು.
‘ಕೃಷ್ಣಾ ಮತ್ತು ಕಾವೇರಿ ಕಣಿವೆಯಲ್ಲಿ ಮಹಾನದಿ ಮತ್ತು ಗೋದಾವರಿ ಕಣಿವೆ ನದಿ ಜೋಡಣೆಯ ಮೂಲಕ
ನೀರು ತಿರುವುಗೊಳಿಸುವ ಯೋಜನೆಯಲ್ಲಿ ಕರ್ನಾಟಕದ ಪಾಲನ್ನು ಕಡಿತ ಗೊಳಿಸಲಾಗಿದೆ’ ಎಂದು ಸಚಿವರು ಸಭೆಯ ಗಮನಕ್ಕೆ ತಂದರು.
ಏನಿದು ಯೋಜನೆ?
ಗೋದಾವರಿ–ಕಾವೇರಿ ನದಿ ಜೋಡಣೆ ಸೇರಿದಂತೆ ದೇಶದ ಐದು ನದಿಗಳ ಜೋಡಣೆಗೆ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲಾಗಿದೆ ಎಂದು ಕೇಂದ್ರ ಸರ್ಕಾರದ 2022–23ನೇ ಬಜೆಟ್ನಲ್ಲಿ ಪ್ರಕಟಿಸಲಾಗಿತ್ತು. ಗೋದಾವರಿ (ಇಂಚಪಲ್ಲಿ)– ಕೃಷ್ಣಾ (ನಾಗಾರ್ಜುನ ಸಾಗರ), ಕೃಷ್ಣಾ (ನಾಗಾರ್ಜುನ ಸಾಗರ)– ಪೆನ್ನಾರ್ (ಸೋಮಶಿಲ), ಪೆನ್ನಾರ್ (ಸೋಮಶಿಲ)– ಕಾವೇರಿ ನದಿ ಜೋಡಿಸುವುದು ಈ ಯೋಜನೆಯ ಉದ್ದೇಶ.
ಮಹಾನದಿ, ಬ್ರಹ್ಮಪುತ್ರ ನದಿ ಕಣಿವೆಗಳ ಹೆಚ್ಚುವರಿ ನೀರನ್ನು ಕೃಷ್ಣಾ, ಪೆನ್ನಾರ್ ಹಾಗೂ ಕಾವೇರಿ ಕಣಿವೆಗೆ ಹರಿಸಲು ಯೋಜಿಸಲಾಗಿದೆ. ಸಂಬಂಧಿತ ರಾಜ್ಯಗಳ ಸಲಹೆ ಪಡೆದು ಡಿಪಿಆರ್ ಸಿದ್ಧಪಡಿಸಲಾಗಿದೆ. ಇದನ್ನು 2021ರ ಏಪ್ರಿಲ್ನಲ್ಲಿ ಸಂಬಂಧಿತ ರಾಜ್ಯಗಳಿಗೆ ಜಲಶಕ್ತಿ ಸಚಿವಾಲಯ ನೀಡಿದೆ. ಹೆಚ್ಚುವರಿ ನೀರಿನ ಲಭ್ಯತೆ ಬಗ್ಗೆ ಆಯಾ ರಾಜ್ಯಗಳು ತಕರಾರು ಎತ್ತಿವೆ. ಈ ವರ್ಷದ ಏಪ್ರಿಲ್ನಲ್ಲಿ ಜಲ ಅಭಿವೃದ್ಧಿ ಸಂಸ್ಥೆಯು ರಾಜ್ಯಗಳ ಜತೆಗೆ ಸಭೆ ನಡೆಸಿ ಯೋಜನೆ ಬಗ್ಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿತು. ಆ ಬಳಿಕ ತಾಂತ್ರಿಕ ಕಾರ್ಯಸಾಧ್ಯತಾ ವರದಿಯನ್ನು ಸಿದ್ಧಪಡಿಸಲಾಯಿತು. ಅಕ್ಟೋಬರ್ 18ರಂದು ಸಚಿವಾಲಯವು ಸಂಬಂಧಿತ ರಾಜ್ಯಗಳ ಜತೆಗೆ ಸಭೆ ನಡೆಸಿ ಯೋಜನೆಗೆ ಸಹಕಾರ ನೀಡುವಂತೆ ಮನವಿ ಮಾಡಿತು.
Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.