ADVERTISEMENT

ಇಫ್ತಾರ್ ಸಮಯಕ್ಕೆ ಪುರಸಭೆಯಲ್ಲಿ ಸೈರನ್‌: ಹಿಂದೂ, ಕ್ರೈಸ್ತ ಸಂಘಟನೆಗಳ ವಿರೋಧ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2023, 8:35 IST
Last Updated 29 ಮಾರ್ಚ್ 2023, 8:35 IST
   

ತಿರುವನಂತಪುರಂ: ಕೇರಳದ ಕೋಟ್ಟಯಂ ಜಿಲ್ಲೆಯ ಪುರಸಭೆಯೊಂದರಲ್ಲಿ ರಂಜಾನ್‌ ತಿಂಗಳ ಸಂಜೆ ವೇಳೆ ಸೈರನ್‌ ಮೊಳಗಿಸುತ್ತಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.

ಉಪವಾಸ ತೊರೆಯಲು ಸಮಯವಾಗಿದೆ ಎಂದು ಸೂಚಿಸಲು ಚಂಗನಶ್ಶೇರಿ ಪುರಸಭೆಯಲ್ಲಿ ಸೈರನ್‌ ಮೊಳಗಿಸಲಾಗುತ್ತಿದೆ.

ಇದರ ವಿರುದ್ಧ ಕೆಲ ಹಿಂದೂ ಹಾಗೂ ಕ್ರೈಸ್ತ ಸಂಘಟನೆಗಳು ಕೇರಳ ಹೈಕೋರ್ಟ್‌ ಮೆಟ್ಟಿಲೇರಿದ್ದಾವೆ. ಆದರೆ ಈ ಸಂಪ್ರದಾಯ ಹಲವು ವರ್ಷಗಳಿಂದ ಪಾಲಿಸಿಕೊಂಡು ಬರಲಾಗುತ್ತಿದೆ ಎಂದು ಪುರಸಭೆಯ ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

ಸಂಜೆ ಸೈರನ್‌ ಮೊಳಗಿಸಲು ಓರ್ವ ಕೆಲಸಗಾರರನ್ನು ನೇಮಕ ಮಾಡಿ ಎಂದು ಪುರಸಭೆ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ಸ್ಥಳೀಯ ಮಸೀದಿಯ ಕಾರ್ಯದರ್ಶಿಯ ಮನವಿಯ ಮೇರೆಗೆ ಈ ಆದೇಶ ಹೊರಡಿಸಲಾಗಿದೆ.

ಇದಕ್ಕೆ ಹಿಂದೂ ಹಾಗೂ ಕ್ರೈಸ್ತ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದು, ರಂಜಾನ್‌ ಉಪವಾಸವು ರಾಜ್ಯ ಅಥವಾ ರಾಷ್ಟ್ರೀಯ ಆಚರಣೆ ಅಲ್ಲ. ಅದು ಮುಸ್ಲಿಮರ ಮಾತ್ರ ಆಚರಣೆ. ಹೀಗಾಗಿ ಸಂವಿಧಾನಿಕ ಸಂಸ್ಥೆಯನ್ನು ಬಳಸುವಂತಿಲ್ಲ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆಗೆ ಪುರಸಭೆ ಕಾರ್ಯದರ್ಶಿ ಲಭ್ಯರಾಗಿಲ್ಲ. ಈ ಸಂಪ್ರದಾಯ ಪುರಸಭೆಯ ತೀರ್ಮಾನದಂತೆ ಕಳೆದ 40 ವರ್ಷಗಳಿಂದ ಪಾಲಿಸಿಕೊಂಡು ಬರಲಾಗುತ್ತಿದೆ. ಆ ವೇಳೆ ಕೈ ಗಡಿಯಾರ ಹಾಗೂ ಇನ್ನಿತರ ವ್ಯವಸ್ಥೆ ಇಲ್ಲದಿದ್ದರಿಂದ ಹೀಗೆ ಮಾಡಲಾಗುತ್ತಿತ್ತು. ಅದು ಈವರೆಗೆ ಮುಂದುವರಿದುಕೊಂಡು ಬಂದಿದೆ. ಕೆಲವರು ಅನಗತ್ಯ ವಿವಾದ ಮಾಡುತ್ತಿದ್ದಾರೆ ಎಂದು ಪುರಸಭೆಯ ಕಾಂಗ್ರೆಸ್‌ ಸದಸ್ಯರೊಬ್ಬರು ಹೇಳಿದ್ದಾರೆ.

ಪುರಸಭೆಯ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿದ್ದು, ಬಿಜೆಪಿ ಸದಸ್ಯರು ಈ ಸಂಪ್ರದಾಯಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಕಾಂಗ್ರೆಸ್‌ ಹಾಗೂ ಸಿಪಿಎಂ ಬೆಂಬಲ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.