ಜಮ್ಮು: ಕಾಶ್ಮೀರಿ ಪಂಡಿತ ಯುವಕರ ನೆರವಿನೊಂದಿಗೆ, ಕಾಶ್ಮೀರದಲ್ಲಿ ನಿರ್ಲಕ್ಷ್ಯಕ್ಕೊಳಗಾಗಿರುವ ದೇವಾಲಯಗಳು ಮತ್ತು ಧಾರ್ಮಿಕ ತಾಣಗಳನ್ನು ಜೀರ್ಣೋದ್ಧಾರ ಮತ್ತು ನವೀಕರಣಗೊಳಿಸಲು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಅಂಗಸಂಸ್ಥೆಯಾಗಿರುವ ಸಂಜೀವಿನಿ ಶಾರದಾ ಕೇಂದ್ರ ಮುಂದಾಗಿದೆ.
‘ನಮ್ಮ ಸಂಜೀವಿನ ಶಾರದಾ ಕೇಂದ್ರದ ಸದಸ್ಯರು, ದೇವಾಲಯ – ಧಾರ್ಮಿಕ ತಾಣಗಳ ಪುನರುಜ್ಜೀವನ ಮತ್ತು ನವೀಕರಣಕ್ಕಾಗಿ ‘ಕಶ್ಯಪ ಭೂಮಿಗಾಗಿ ಯುವಜನ ಸೇವೆ‘ ಎಂಬ ಆಂದೋಲನವನ್ನು ಆರಂಭಿಸಲಿದ್ದಾರೆ‘ ಎಂದು ಕೇಂದ್ರದ ಮುಖ್ಯಸ್ಥ ಕ್ರಿಸೇನ್ ಟಾಕ್ರೂ ತಿಳಿಸಿದ್ದಾರೆ.
‘ಕಾಶ್ಮೀರದಲ್ಲಿ ನಿರ್ಲಕ್ಷ್ಯಕ್ಕೊಳಗಾಗಿರುವ ದೇವಾಲಯಗಳು, ಕ್ಷೇತ್ರಗಳನ್ನು ಪುನರುಜ್ಜೀವನ ಗೊಳಿಸಿ, ಸಂರಕ್ಷಿಸಿ, ಅವುಗಳ ನಿರ್ವಹಣೆಯ ಜವಾಬ್ದಾರಿಯನ್ನು ತೆಗೆದುಕೊಳ್ಳಲಿದ್ದಾರೆ. ಇದರ ಜೊತೆಗೆ, ಕಾಶ್ಮೀರದಲ್ಲಿ ಧಾರ್ಮಿಕ ಪ್ರವಾಸವನ್ನು ಸುಗಮಗೊಳಿಸುವ ಜೊತೆಗೆ, ಪ್ರವಾಸಿಗರಿಗೆ ಸಂರಕ್ಷಿತ ತಾಣಗಳನ್ನು ಪರಿಚಯಿಸುತ್ತಾ, ಅವರ ವಾಸ್ತವ್ಯಕ್ಕೂ ವ್ಯವಸ್ಥೆ ಮಾಡಲಿದ್ದಾರೆ‘ ಎಂದು ಟಾಕ್ರೂ ತಿಳಿಸಿದ್ದಾರೆ.
ಈ ಆಂದೋಲನದಲ್ಲಿ ಭಾಗವಹಿಸಲು ಆಸಕ್ತಿಯುಳ್ಳವರ ನೋಂದಣಿ ಪ್ರಕ್ರಿಯೆಯನ್ನೂ ನಮ್ಮ ಕೇಂದ್ರ ಆರಂಭಿಸಲಿದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.