ADVERTISEMENT

ದೇಶದಲ್ಲಿ ಹೆಚ್ಚುತ್ತಿರುವ ಆದಾಯ ಅಸಮಾನತೆ, ನಿರುದ್ಯೋಗ, ಬಡತನ: ಆರೆಸ್ಸೆಸ್‌ ಕಳವಳ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2022, 13:32 IST
Last Updated 3 ಅಕ್ಟೋಬರ್ 2022, 13:32 IST
ದತ್ತಾತ್ರೇಯ ಹೊಸಬಾಳೆ
ದತ್ತಾತ್ರೇಯ ಹೊಸಬಾಳೆ   

ನವದೆಹಲಿ: ದೇಶದಲ್ಲಿ ಹೆಚ್ಚುತ್ತಿರುವ ಆದಾಯ ಅಸಮಾನತೆ ಮತ್ತು ನಿರುದ್ಯೋಗ ಸಮಸ್ಯೆ ಬಗ್ಗೆಆರೆಸ್ಸೆಸ್‌ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆಕಳವಳ ವ್ಯಕ್ತಪಡಿಸಿದರು.

ಆರೆಸ್ಸೆಸ್‌ಅಂಗಸಂಸ್ಥೆ ಸ್ವದೇಶಿ ಜಾಗರಣ್ ಮಂಚ್ (ಎಸ್‌ಜೆಎಂ) ಭಾನುವಾರ ಆಯೋಜಿಸಿದ್ದ ವೆಬಿನಾರ್‌ ಉದ್ದೇಶಿಸಿ ಅವರು ಮಾತನಾಡಿದರು.

ಬಡತನವೂ ನಮ್ಮ ಎದುರು ರಾಕ್ಷಸನಂತೆ ಸವಾಲೊಡ್ಡಿದೆ.ದೇಶದಲ್ಲಿ 20 ಕೋಟಿ ಜನರು ಬಡತನ ರೇಖೆಗಿಂತ ಕೆಳಗಿದ್ದಾರೆ ಎಂದು ಹೇಳಲು ನಾವು ದುಃಖಪಡಬೇಕು. 23 ಕೋಟಿ ಜನರು ದಿನಕ್ಕೆ ₹375ಕ್ಕಿಂತ ಕಡಿಮೆ ಸಂಪಾದಿಸುತ್ತಿದ್ದಾರೆ. ರಾಕ್ಷಸನಂತೆ ಬೃಹದಾಕಾರದಲ್ಲಿ ಬೆಳೆದಿರುವ ಬಡತನದ ಸಂಪೂರ್ಣ ನಿರ್ಮೂಲನೆ ಮುಖ್ಯ.ಈ ಸವಾಲುಗಳನ್ನು ಎದುರಿಸಲು ಕಳೆದ ಕೆಲವು ವರ್ಷಗಳಿಂದ ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಕೇಂದ್ರ ಸರ್ಕಾರದ ಆತ್ಮನಿರ್ಭರ ಭಾರತ್‌, ಎಫ್‌ಪಿಒ, ಜನ್‌ಧನ್‌,ಆರೋಗ್ಯ ರಕ್ಷಣೆ ಮತ್ತು ಡಿಜಿಟಲ್ ಕ್ರಾಂತಿಗೆ ಸಂಬಂಧಿಸಿದ ಯೋಜನೆಗಳು ಉತ್ತಮ ಪ್ರಯತ್ನಗಳು ಎಂದು ಅವರು ಶ್ಲಾಘಿಸಿದರು.

ADVERTISEMENT

ದೇಶದಲ್ಲಿ 4 ಕೋಟಿ ಜನರು ನಿರುದ್ಯೋಗಿಗಳಿದ್ದಾರೆ. ಗ್ರಾಮೀಣ ಭಾಗದಲ್ಲಿ 2.2 ಕೋಟಿ ಹಾಗೂ ನಗರ ಪ್ರದೇಶಗಳಲ್ಲಿ 1.8 ಕೋಟಿ ನಿರುದ್ಯೋಗಿಗಳು ಇದ್ದಾರೆ. ಈ ಹಿಂದಿನ ಸರ್ಕಾರದ ದೋಷಪೂರಿತ ಆರ್ಥಿಕ ನೀತಿಗಳು, ರೋಗಗ್ರಸ್ಥ ಆರ್ಥಿಕತೆ ಈ ಸಮಸ್ಯೆಗಳಿಗೆ ಮೂಲ ಕಾರಣ ಎಂದು ಅವರು ದೂಷಿಸಿದರು.

ಗ್ರಾಮೀಣ ಪ್ರದೇಶಗಳಲ್ಲಿ ಗುಡಿಕೈಗಾರಿಕೆಗಳು ಮತ್ತು ಕೌಶಲ ಅಭಿವೃದ್ಧಿ ಕ್ಷೇತ್ರದಲ್ಲಿ ಹೆಚ್ಚಿನ ಉಪಕ್ರಮಗಳಿಗೆ ಉತ್ತೇಜನ ನೀಡಬೇಕು. ಆ ಮೂಲಕ ಗ್ರಾಮೀಣ ಮಟ್ಟದಲ್ಲಿ ಉದ್ಯೋಗವಕಾಶ ಸೃಷ್ಟಿಸುವ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಎಸ್‌ಜೆಎಂ ‘ಸ್ವಾವಲಂಬಿ ಭಾರತ್ ಅಭಿಯಾನ್’ ಪ್ರಾರಂಭಿಸಿದೆ. ಇದರ ಮೂಲಕ, ಎಸ್‌ಜೆಎಂ ಕೃಷಿ ಮತ್ತು ಇದರ ಅವಲಂಬಿತ ಕ್ಷೇತ್ರಗಳಲ್ಲಿ ಹೊಸ ಉಪಕ್ರಮಗಳ ಅನುಷ್ಠಾನಕ್ಕೆ ಪ್ರಯತ್ನಿಸುತ್ತಿದೆ. ಜತೆಗೆ ಗ್ರಾಮೀಣ ಮಟ್ಟದಲ್ಲಿ ಕೌಶಲ ಅಭಿವೃದ್ಧಿ ಮತ್ತು ಮಾರುಕಟ್ಟೆ ಒದಗಿಸುತ್ತದೆ ಎಂದು ಹೊಸಬಾಳೆ ಹೇಳಿದರು.

ಇಷ್ಟೊಂದು ಆದಾಯಅಸಮಾನತೆಯ ನಡುವೆಯೂ ಭಾರತ, ವಿಶ್ವದ ಆರು ಅತಿದೊಡ್ಡ ಆರ್ಥಿಕತೆಯ ದೇಶಗಳಲ್ಲಿ ಒಂದೆನಿಸಿದೆ. ಒಟ್ಟು ಆದಾಯದಲ್ಲಿ ಶೇ 13ರಷ್ಟನ್ನು ಮಾತ್ರ ದೇಶದ ಶೇ 50ರಷ್ಟು ಜನಸಂಖ್ಯೆ ಹೊಂದಿದೆ. ದೇಶದ ಒಟ್ಟುಜನಸಂಖ್ಯೆಯ ಶೇ 1 ಭಾಗವು ರಾಷ್ಟ್ರದ ಆದಾಯದ 5ನೇ ಒಂದರಷ್ಟು ಹೊಂದಿದೆ. ಇದುಉತ್ತಮ ಸನ್ನಿವೇಶವೇ? ಎಂದು ಅವರು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.